ಬೆಳಗಾವಿ: ‘ಸದನದಲ್ಲಿ ‘ನೀಲಿ ಚಿತ್ರ’ ನೋಡಿದ್ದ ಲಕ್ಷ್ಮಣ ಸವದಿ ಅವರನ್ನು ಬಿಜೆಪಿ ಉಪ ಮುಖ್ಯಮಂತ್ರಿ ಮಾಡಿದೆ. ಆ ಪಕ್ಷಕ್ಕೆ ಮಾನ– ಮರ್ಯಾದೆ ಇದೆಯೇ?’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.
ಅಥಣಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ‘ಅಥಣಿ ಕ್ಷೇತ್ರದ ಜನರು ಸವದಿ ಅವರನ್ನು ತಿರಸ್ಕರಿಸಿದ್ದರು. ಅಂತಹವರಿಗೆ ಬಿಜೆಪಿ ಮಣೆ ಹಾಕಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಬಿಜೆಪಿಗೆ ಜನಾದೇಶವಿಲ್ಲ. ಅದಕ್ಕೆ ಸರ್ಕಾರ ನಡೆಸುವುದಕ್ಕೆ ಯೋಗ್ಯತೆ ಇಲ್ಲ’ ಎಂದು ಇಲ್ಲಿ ತರಾಟೆಗೆ ತೆಗೆದುಕೊಂಡರು.
‘ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಗೆದ್ದು ಬಳಿಕ ಮೋಸ ಮಾಡಿದ ಶ್ರೀಮಂತ ಪಾಟೀಲಗೆ ಜನರು ತಕ್ಕಪಾಠ ಕಲಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದರು.
‘ಬಿಜೆಪಿ ಶಾಸಕ ಉಮೇಶ್ ಕತ್ತಿಗೆ ನಾನು ಕರೆ ಮಾಡಿರಲಿಲ್ಲ. ಅವರೇ ಸಂಪರ್ಕಿಸಿದ್ದರು. ಬಿಜೆಪಿಯಲ್ಲಿ ಬಹಳಷ್ಟು ಹಿರಿಯರನ್ನು ಕಡೆಗಣಿಸಿದ್ದಾರೆ. ಹೀಗಾಗಿ, ಯಾವಾಗ ಬೇಕಾದರೂ ಭಿನ್ನಮತ ಸ್ಫೋಟವಾಗಬಹುದು’ ಎಂದರು.