ಹುಬ್ಬಳ್ಳಿ: ಭಾನುವಾರ(ಫೆಬ್ರುವರಿ 10) ನಡೆಯಲಿರುವ ಲೋಕಸಭಾ ಚುನಾವಣಾರ್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆ ಮಾಡುವುದಾಗಿ ಧಾರವಾಡ ಎಸ್.ಪಿ ಕಚೇರಿಗೆ ಬೆದರಿಕೆ ಪತ್ರವೊಂದು ಬಂದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಬೆದರಿಕೆ ಪತ್ರವನ್ನು 10 ದಿನಗಳ ಹಿಂದೆಯೇ ಹಾವೇರಿಯಿಂದ ಧಾರವಾಡ ಎಸ್.ಪಿ ಕಚೇರಿಗೆ ಪೋಸ್ಟ್ ಮಾಡಿರುವುದು ಪ್ರಾಥಮಿಕ ಪರಿಶೀಲನೆಯಿಂದ ತಿಳಿದುಬಂದಿದೆ.
ಈ ಸಂಬಂಧ ಧಾರವಾಡ ಉಪನಗರ ಠಾಣೆಯಲ್ಲಿ ಫೆಬ್ರುವರಿ 9ರಂದುಪ್ರಕರಣ ದಾಖಲಾಗಿದೆ.
ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಎರಡು ತನಿಖಾ ತಂಡಗಳನ್ನು ರಚಿಸಲಾಗಿದ್ದು, ತಂಡವು ಹಾವೇರಿಯಲ್ಲಿ ಪರಿಶೀಲನೆ ನಡೆಸಿದ್ದು, ಇದೊಂದು ನಕಲಿ ಬೆದರಿಕೆ ಪತ್ರ ಎಂದು ಖಚಿತ ಪಡಿಸಿದ್ದಾರೆ.
ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿರುವ ಹಾವೇರಿ ಎಸ್.ಪಿ. ಪರಶುರಾಮ 'ಮೋದಿ ಹತ್ಯೆ ಮಾಡುವುದಾಗಿ ಧಾರವಾಡ ಎಸ್.ಪಿ ಕಚೇರಿಗೆ ಬಂದಿರುವ ಬೆದರಿಕೆ ಪತ್ರವು ನಕಲಿ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಪತ್ರದ ಹಿನ್ನೆಲೆಯಲ್ಲಿ ಪ್ರಧಾನಿ ಅವರಿಗೆ ಯಾವುದೇ ಅಪಾಯವಿಲ್ಲ. ಆದರೂ ಪ್ರಧಾನಿ ಸಮಾವೇಶದ ಭದ್ರತೆಯನ್ನು ಹೆಚ್ಚಿಸಲಾಗಿದೆ' ಎಂದರು.
ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿರುವ ಜನ
ಸಮಾವೇಶಕ್ಕೆ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದ್ದು,'ಪತ್ರದ ಕುರಿತು ಸಮಗ್ರ ತನಿಖೆ ಮುಂದುವರಿದಿದೆ' ಎಂದು ಹೇಳಿದರು.