ನವದೆಹಲಿ: ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರನ್ನು 14 ದಿನಗಳ ಕಸ್ಟಡಿ ಕೇಳಿದ್ದನ್ನು ಶಿವಕುಮಾರ್ ಪರ ಹಾಜರಾಗಿದ್ದ ಹಿರಿಯ ವಕೀಲ ಎ.ಎಂ. ಸಿಂಘ್ವಿ ಮತ್ತು ದಯನ್ ಕೃಷ್ಣ್ ಅವರು ದೆಹಲಿಯ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ವಿರೋಧಿಸಿದರು.
2017ರಲ್ಲಿ ಆದಾಯ ತೆರಿಗೆ ಇಲಾಖೆ ನಡೆಸಿದ್ದ ಶೋಧದ ಆಧಾರದಲ್ಲಿ ಇಡೀ ಪ್ರಕರಣ ನಿಂತಿದೆ. ಆದಾಯ ತೆರಿಗೆ ಇಲಾಖೆಯು 2018ರ ಜೂನ್ 13ರಂದು ಪ್ರಕರಣ ದಾಖಲಿಸಿದೆ. ಇದಕ್ಕೆ 2019ರ ಆಗಸ್ಟ್ 20ರಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಈಗಲೂ ಊರ್ಜಿತ ಎಂದು ಅವರು ವಾದಿಸಿದರು.
ಆದಾಯ ತೆರಿಗೆ ಇಲಾಖೆಯ ತನಿಖೆ ಮತ್ತು ಸಾಕ್ಷಿಗಳ ಹೇಳಿಕೆಗಳು ಶಿವಕುಮಾರ್ ವಿರುದ್ಧ ಹಲವು ಪುರಾವೆಗಳನ್ನು ಒದಗಿಸಿವೆ ಎಂದು ಇ.ಡಿ. ಪರ ವಕೀಲರು ವಾದಿಸಿದರು.