ಬೆಂಗಳೂರು: ‘ಸೇನೆಯ ಸಮವಸ್ತ್ರ ಧರಿಸಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುವ ಮೂಲಕ ಗಂಭೀರ ಅಪರಾಧ ಎಸಗಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ಪರ್ಧೆಯಿಂದಲೇ ಅನರ್ಹಗೊಳಿಸುವಂಥ ಕಠಿಣ ನಿರ್ಧಾರವನ್ನು ಕೇಂದ್ರ ಚುನಾವಣಾ ಆಯೋಗ ತೆಗೆದುಕೊಳ್ಳಬೇಕು’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ. ಪಾಟೀಲ ಆಗ್ರಹಿಸಿದರು.
ಮಾಧ್ಯಮ ಸಂವಾದದಲ್ಲಿ ಸೋಮವಾರ ಮಾತನಾಡಿದ ಅವರು, ‘ದೇಶದ ರಕ್ಷಣಾ ವಿಷಯಗಳನ್ನು ಮೋದಿ ಚುನಾವಣಾ ಪ್ರಚಾರ ವಿಷಯಗಳನ್ನಾಗಿ ಮಾಡಿಕೊಂಡಿದ್ದಾರೆ’ ಎಂದು ದೂರಿದರು.
ಮತ್ತೊಂದು ಪ್ರಕರಣವನ್ನು ಉಲ್ಲೇಖಿಸಿದ ಎಚ್.ಕೆ. ಪಾಟೀಲ, ‘ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸೇನೆಯನ್ನು ಮೋದಿ ಸೇನೆ ಎಂದು ಕರೆಯುತ್ತಾರೆ. ಇದನ್ನು ದೇಶದ್ರೋಹಿ ಮಾಡಬಹುದೇ ಹೊರತು ದೇಶಪ್ರೇಮಿ ಮಾಡಲು ಸಾಧ್ಯವಿಲ್ಲ. ಆಯೋಗ ಇದನ್ನು ಗಮನಿಸಿದೆಯಾದರೂ ಕ್ರಮ ಕೈಗೊಳ್ಳಲಿಲ್ಲ’ ಎಂದರು.
ಮಹತ್ವದ ಜವಾಬ್ದಾರಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗದಿರುವ ಕುರಿತು ಪ್ರತಿಕ್ರಿಯಿಸಿದ ಪಾಟೀಲ, ‘ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಮಹತ್ವದ ಜವಾಬ್ದಾರಿ‘ ಎಂದರು.
‘ಮಂಡ್ಯ, ಮೈಸೂರಿನಲ್ಲಿ ಮೈತ್ರಿಯಲ್ಲಿರುವ ಗೊಂದಲಗಳನ್ನು ಸಿದ್ದ ರಾಮಯ್ಯ ಬಗೆಹರಿಸಿದ್ದಾರೆ. ಖರ್ಗೆ ಅವರನ್ನು ಸೋಲಿಸುವ ಬಿಜೆಪಿ ಕುತಂತ್ರ ಫಲಿಸುವುದಿಲ್ಲ’ ಎಂದರು.