ಯಾದಗಿರಿ: ‘ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತರನ್ನು ಕಡೆಗಣಿಸಿವೆ. ಸಂಕಷ್ಟದಲ್ಲಿರುವ ರೈತರಿಗೆ ನೆರವಾಗುತ್ತಿಲ್ಲ. ರಾಷ್ಟ್ರೀಯ ಪಕ್ಷಗಳಿಂದ ಜನ ಭ್ರಮನಿರಸನಗೊಂಡಿದ್ದಾರೆ. ಕಾರಣ ಅವರು ಪ್ರಾದೇಶಿಕ ಪಕ್ಷದ ಕಡೆ ಮುಖ ಮಾಡಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿ ಹನುಮೇಗೌಡ ಬಿರಣಕಲ್ ತಿಳಿಸಿದರು.
ಜಿಲ್ಲೆಯ ರಾಮಸಮುದ್ರ ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜನಸಂಪರ್ಕ ಯಾತ್ರೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ಪ್ರಮುಖರನ್ನು ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು.
‘ಅಲ್ಪಸಂಖ್ಯಾತರ ಓಟು ಬ್ಯಾಂಕ್ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ ದಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ಲಾಭವಾಗಿಲ್ಲ. ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅವರನ್ನು ಮೇಲೆತ್ತಿಲ್ಲ. ಹಿಂದುಳಿದ ಕ್ಷೇತ್ರದಲ್ಲಿ ಕನಿಷ್ಠ ಕುಡಿಯುವ ನೀರಿಗೂ ತೊಂದರೆ ಅನುಭವಿಸುವಂತೆ ಆಗಿದೆ. ರೈತರನ್ನು ಕಡೆಗಣಿಸಿದ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಆರೋಪಿಸಿದರು.
‘ಬಡ ಕುಟುಂಬದಿಂದ ಬಂದವನಾಗಿದ್ದರಿಂದ ಬಡವರ ಕಷ್ಟ ನನಗೆ ಗೊತ್ತಿದೆ. ಕ್ಷೇತ್ರದ ಶಾಸಕರು ಗ್ರಾಮೀಣ ಪ್ರದೇಶಗಳತ್ತ ಮುಖ ಮಾಡಿಲ್ಲ. ಬಿಜೆಪಿ ಬಾಯಿ ಮಾತಿಯಲ್ಲಿ ಅಭಿವೃದ್ಧಿ ಎನ್ನುತ್ತಲೆ ಮುಗ್ದ ಜನರನ್ನು ಮರಳು ಮಾಡುತ್ತಿದೆ. ನಾವೆಲ್ಲರೂ ಜಾಗೃತಗೊಳ್ಳಬೇಕಿದೆ. ಅಭಿವೃದ್ಧಿಗಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಿ’ ಎಂದು ಮನವಿ ಮಾಡಿದರು.
ಪಕ್ಷದ ಮುಖಂಡರಾದ ರಫಿಕ್ ಸಾಬ್ ಉಳ್ಳೆಸೂಗೂರ, ಪ್ರಭು ಕೋಡಾಲ್, ವಿಶ್ವನಾಥ ನಾಯಕ, ಬಸವರಾಜ ಕಲಾಲ್, ಬಸವರಾಜ ಮುಂಡರಗಿ, ರವಿ ಬಾಗ್ಲಿ, ಹಣಮಂತ ಉಪಸ್ಥಿತರಿದ್ದರು.