ಬೆಂಗಳೂರು: ‘ಲಾಕ್ಡೌನ್ ಅವಧಿಯಲ್ಲಿ ರಾಜ್ಯದಾದ್ಯಂತ ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿ ಏರಿಕೆ ಕಂಡು ಬಂದಿದ್ದು 480 ದೂರು ಸ್ವೀಕರಿಸಲಾಗಿದೆ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.
‘ಅಂತೆಯೇ ಈ ಅವಧಿಯಲ್ಲಿ ಮಾನಸಿಕ ಕ್ಷೋಭೆಗೆ ಒಳಗಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದಕ್ಕಾಗಿ ನಿಮ್ಹಾನ್ಸ್ ವೈದ್ಯರ ಮೂಲಕ ಚಿಕಿತ್ಸೆ ನೀಡುವ ದಿಸೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ’ ಎಂದು ಸರ್ಕಾರಿ ವಕೀಲರು ಕೋರ್ಟ್ಗೆ ತಿಳಿಸಿದ್ದಾರೆ.
ಕೋವಿಡ್-19ರ ತಾಪತ್ರಯಗಳಿಗೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು ಈ ಕುರಿತಂತೆ ಮಾಹಿತಿ ನೀಡಿ, ‘ಸಾಂತ್ವನ ಕೇಂದ್ರಗಳಿಗೆ 315, ಮಹಿಳಾ ಸಹಾಯವಾಣಿಗೆ 165 ಕರೆಗಳು ಬಂದಿವೆ. ಇವುಗಳಿಗೆ ಸ್ಪಂದಿಸಲು 18 ಸಂರಕ್ಷಣಾಧಿಕಾರಿ ಹಾಗೂ 186 ಹೆಚ್ಚುವರಿ ಅಧಿಕಾರಿಗಳಿದ್ದಾರೆ’ ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ನಿಮ್ಹಾನ್ಸ್ ವೈದ್ಯ ನವೀನ್ ಕುಮಾರ್ ಅವರು ಕೋರ್ಟ್ನ ವಿಚಾರಣೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಹಾಜರಾಗಿ ಮಾಹಿತಿ ನೀಡಲಿ’ ಎಂದು ಸೂಚಿಸಿದೆ.