ಶಿರಸಿ: ಅಳಿವಿನ ಅಂಚಿಗೆ ಬಂದಿರುವ ಔಷಧ ಸಸ್ಯಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಶಿರಸಿಯಲ್ಲಿ ಫೀಲ್ಡ್ ಜೀನ್ ಬ್ಯಾಂಕ್ ಪ್ರಾರಂಭಿಸಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಪಾರಂಪರಿಕ ಚಿಕಿತ್ಸಾ ವಿಜ್ಞಾನ ಸಂಸ್ಥೆ ಬೆಳಗಾವಿಯ ನಿರ್ದೇಶಕ ಎಸ್.ಎಲ್.ಹೂಟಿ ಹೇಳಿದರು.
ಶನಿವಾರ ಇಲ್ಲಿ ಆಯೋಜಿಸಿದ್ದ ಪಾರಂಪರಿಕ ವೈದ್ಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಿರಸಿ ಸುತ್ತಮುತ್ತಲಿನ ಪ್ರದೇಶಗಳು ಔಷಧ ಸಸ್ಯಗಳ ಆಗರಗಳಾಗಿವೆ. ಇಲ್ಲಿ ಲಭ್ಯವಾಗುವ ಸಸ್ಯಗಳ ಪುನರುತ್ಪಾದನೆ ದೃಷ್ಟಿಯಿಂದ ಜೀನ್ ಬ್ಯಾಂಕ್ ಸಹಕಾರಿಯಾಗಲಿದೆ ಎಂದರು.
ಪಾರಂಪರಿಕ ವೈದ್ಯರು, ಅವರು ನೀಡುವ ಔಷಧದ ಬಗ್ಗೆ ಐಸಿಎಂಆರ್ ಸಂಶೋಧನೆ ನಡೆಸಿ, ಸಕಾರಾತ್ಮಕ ಫಲಿತಾಂಶ ದೊರೆತಿರುವವರನ್ನು ಗುರುತಿಸುವ ಬಗ್ಗೆ ಕೂಡ ಯೋಚಿಸಿದೆ ಎಂದರು.