ಮಂಗಳೂರು: ಜಮ್ಮು–ಕಾಶ್ಮೀರದಲ್ಲಿ 370 ನೇ ವಿಧಿ ಹಾಗೂ 35 ಎ ವಿಧಿ ರದ್ದುಗೊಂಡಿರುವ ಬೆನ್ನಲ್ಲೇ ಇದೀಗ ಕರಾವಳಿ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್. ಶೆಟ್ಟಿ ಅವರು, ಜಮ್ಮು– ಕಾಶ್ಮೀರದಲ್ಲಿ ಬೃಹತ್ ಫಿಲ್ಮ್ ಸಿಟಿ ಆರಂಭಿಸಲು ಯೋಜನೆ ರೂಪಿಸಿದ್ದಾರೆ.
ಅರಬ್ ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ ವೇಳೆ ಈ ವಿಷಯವನ್ನು ತಿಳಿಸಿರುವ ಬಿ.ಆರ್. ಶೆಟ್ಟಿ, ‘ಜಮ್ಮು-ಕಾಶ್ಮೀರ ಅತ್ಯಂತ ರಮಣೀಯ ಸ್ಥಳವಾಗಿದ್ದು, ಅಲ್ಲಿ ಫಿಲ್ಮ್ ಸಿಟಿ ಆರಂಭಿಸಲು ಯೋಜನೆ ರೂಪಿಸಿದ್ದೇನೆ. ಹೀಗಾಗಿ ಜನರು ಅಲ್ಲಿಗೆ ಬಂದು ಚಿತ್ರಗಳನ್ನು ಚಿತ್ರೀಕರಿಸಬಹುದು’ ಎಂದಿದ್ದಾರೆ.
‘ನನಗೆ ಈಗಾಗಲೇ ಜಮ್ಮು ಕಾಶ್ಮೀರ ಮತ್ತು ಲಡಾಕ್ನಲ್ಲಿ ಸುಮಾರು 3 ಸಾವಿರ ಎಕರೆಯಷ್ಟು ಜಾಗ ನೀಡುವುದಾಗಿ ಆಫರ್ಗಳು ಬಂದಿವೆ’ ಎಂದು ಹೇಳಿದ್ದಾರೆ.
ಆಗಸ್ಟ್ನಲ್ಲಿ ನರೇಂದ್ರ ಮೋದಿ ಅವರು ಯುಎಇಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಜಮ್ಮು ಕಾಶ್ಮೀರದಲ್ಲಿ ₹ 7 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಬಿ.ಆರ್. ಶೆಟ್ಟಿ ಪ್ರಕಟಿಸಿದ್ದರು.
ಸಂವಿಧಾನದ 35ಎ ವಿಧಿ ಕಾಶ್ಮೀರದ ಜನರಿಗೆ ವಿಶೇಷ ಸೌಲಭ್ಯ ಕಲ್ಪಿಸಿತ್ತು. ಕಾಶ್ಮಿರದ ನಿವಾಸಿಗಳನ್ನು ಹೊರತುಪಡಿಸಿ ಅನ್ಯ ರಾಜ್ಯದವರು ಆಸ್ತಿಗಳನ್ನು ಖರೀದಿಸಲು ಅವಕಾಶ ಇರಲಿಲ್ಲ. ಕೇಂದ್ರ ಸರ್ಕಾರ 370ನೇ ವಿಧಿ ಹಾಗೂ 35ಎ ವಿಧಿಯನ್ನು ರದ್ದುಗೊಳಿಸಿರುವುದರಿಂದ ಕಾಶ್ಮೀರದಲ್ಲಿ ಹೂಡಿಕೆ ಮತ್ತು ಆಸ್ತಿ ಖರೀದಿಗೆ ಅವಕಾಶ ಇದೆ.