ಚಿತ್ರದುರ್ಗ: ಶಾಸಕ ಡಿ.ಕೆ.ಶಿವಕುಮಾರ್ ಬಂಧನ ವಿರೋಧಿಸಿ ಚಳ್ಳಕೆರೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರಿಗೆ ಬೆಂಕಿ ತಗುಲಿ ಗಾಯಗೊಂಡಿದ್ದಾರೆ.
ಟೈರಿಗೆ ಬೆಂಕಿ ಹಚ್ಚುವಾಗ ಈ ಅವಘಡ ಸಂಭವಿಸಿದೆ. ಎಂಟು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಪೊಲೀಸ್ ಕಾನ್ಸ್ಟೆಬಲ್ ಗಾಯಗೊಂಡಿದ್ದಾರೆ. ಇವರನ್ನು ಚಳ್ಳಕೆರೆ ಹಾಗೂ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಂಗ್ರೆಸ್ ಕಾರ್ಯಕರ್ತರಾದ ಲಿಂಗಮ್ಮ, ಶಂಕರಪ್ಪ, ಸಯ್ಯದ್ ಕಲೀಂ, ಶಿವರಾಜ್, ಮಂಜುನಾಥ್, ಶ್ರೀನಿವಾಸಮೂರ್ತಿ, ಮಲ್ಲಿಕಾರ್ಜುನಪ್ಪ, ತಿಪ್ಪೇಸ್ವಾಮಿ ಹಾಗೂ ಕಾನ್ಸ್ಟೆಬಲ್ ಅಣ್ಣಪ್ಪ ಗಾಯಗೊಂಡವರು ಎಂದು ಗುರುತಿಸಲಾಗಿದೆ.
ಚಳ್ಳಕೆರೆಯ ನೆಹರೂ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸುತ್ತಿದ್ದರು. ಟೈರುಗಳನ್ನು ರಸ್ತೆಯ ಮೇಲಿಟ್ಟು ಬೆಂಕಿ ಹಚ್ಚುವಾಗ ಆಕಸ್ಮಿಕವಾಗಿ ತಗುಲಿದೆ. ಬೆಂಕಿ ನಂದಿಸಲು ಪ್ರಯತ್ನಿಸಿದ ಪೊಲೀಸ್ ಕಾನ್ಸ್ಟೆಬಲ್ ಕೂಡ ಗಾಯಗೊಂಡಿದ್ದಾರೆ. ತಲೆ, ಕೈ, ಕಾಲುಗಳಿಗೆ ಬೆಂಕಿ ತಗುಲಿದೆ.