ಬಳ್ಳಾರಿ: ಭಾನುವಾರ ಇಲ್ಲಿ ನಡೆದ ರಾಜ್ಯ ಪಿ.ಯು. ಕಾಲೇಜುಗಳ ಫುಟ್ಬಾಲ್ ಟೂರ್ನಿಯ ಅಂತಿಮ ಪಂದ್ಯದಲ್ಲಿ ಬಾಲಕರ ವಿಭಾಗದಲ್ಲಿ ಬಳ್ಳಾರಿ ಹಾಗೂ ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ ಜಯಗಳಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿವೆ.
ಇಲ್ಲಿನ ಬಿ.ಡಿ.ಎ.ಎ. ಮೈದಾನದಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಬಳ್ಳಾರಿ ಬಾಲಕರ ತಂಡವು ದಕ್ಷಿಣ ಕನ್ನಡ ತಂಡವನ್ನು 5–0 ಅಂತರದಿಂದ ಸೋಲಿಸಿದರೆ, ದಕ್ಷಿಣ ಕನ್ನಡದ ವನಿತೆಯರು ಬೆಳಗಾವಿ ತಂಡವನ್ನು 1–0 ಗೋಲುಗಳಿಂದ ಸೋಲಿಸಿ ವಿಜಯಿಯಾದರು.
ಬಳ್ಳಾರಿ ತಂಡದ ಆಟಗಾರ ಸಂತೋಷ ಮೊದಲ ಸುತ್ತಿನಲ್ಲಿ ಮೂರು ಗೋಲು ಬಾರಿಸಿ ತಂಡದ ಜಯಕ್ಕೆ ಭದ್ರ ಅಡಿಪಾಯ ಹಾಕಿದರು. ಎರಡನೇ ಸುತ್ತಿನಲ್ಲಿ ತೇಜಸ್ ಎರಡು ಗೋಲು ಹೊಡೆದರು.
ಸೆಮಿಫೈನಲ್ ನಲ್ಲಿ ಬಳ್ಳಾರಿ ಬಾಲಕರ ತಂಡವು 3–0 ಗೋಲುಗಳಿಂದ ಕೊಡಗು ಜಿಲ್ಲೆಯನ್ನು ಮಣಿಸಿತು. ದಕ್ಷಿಣ ಕನ್ನಡ ತಂಡ 6–1ರಿಂದ ಬೆಳಗಾವಿ ತಂಡವನ್ನು ಸೋಲಿಸಿ ಅಂತಿಮ ಘಟ್ಟ ತಲುಪಿತು.
ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡವು 2–0 ಅಂತರದಿಂದ ಬೆಂಗಳೂರು ದಕ್ಷಿಣ ಜಿಲ್ಲೆಯನ್ನು ಸೋಲಿಸಿದರೆ, ಬೆಳಗಾವಿ ತಂಡ 4–2ರಿಂದ ಬೆಂಗಳೂರು ಉತ್ತರ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿತು.