ಸಂಕೇಶ್ವರ: ಮಾಜಿ ಸಚಿವ ಮಲ್ಲಾರಿಗೌಡ ಶಂಕರಗೌಡ ಪಾಟೀಲ ( 79) ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನರಾದರು.
ಮೃತರಿಗೆ ಪತ್ನಿ, ನಾಲ್ಕು ಪುತ್ರಿಯರು ಇದ್ದಾರೆ.
ಸಂಕೇಶ್ವರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದರು. ದಿ.ಎಸ್.ಬಂಗಾರಪ್ಪ ಅವರ ಸಚಿವ ಸಂಪುಟದಲ್ಲಿ ಭಾರಿ ಮತ್ತು ಮಧ್ಯಮ ನೀರಾವರಿ ಸಚಿವರಾಗಿದ್ದರು. ಹಿಡಕಲ್ ಜಲಾಶಯದ ಮೂಲಕ ಸಂಕೇಶ್ವರ, ಹುಕ್ಕೇರಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ರೂಪಿಸಿದ್ದರು. ಹಣಕಾಸಿನ ಅನುಮೋದನೆ ಕೊಡಿಸಿದ್ದರು.
1991ರಲ್ಲಿ ಆದ್ಯಶ್ರೀ ನಿಜಲಿಂಗೇಶ್ವರ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಶಾಲಾ, ಪದವಿ ಕಾಲೇಜು, ಹೋಮಿಯೊಪಥಿ, ಕಾನೂನು ಕಾಲೇಜು ಸ್ಥಾಪಿಸಿದರು.
ಮೃತರ ಅಂತ್ಯಕ್ರಿಯೆ ಬುಧವಾರ ಮಧ್ಯಾಹ್ನ ಸಂಕೇಶ್ವರದ ಅವರ ತೋಟದ ಮನೆಯಲ್ಲಿ ನೆರವೇರಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.