ಬೆಂಗಳೂರು: ರಾಜ್ಯ ಸರ್ಕಾರಿ ನೌಕರರು ಏಪ್ರಿಲ್ ತಿಂಗಳ ವೇತನವನ್ನು ಯಾವುದೇ ಕಡಿತ ಇಲ್ಲದೇ ಪಡೆಯಲಿದ್ದಾರೆ.
ಈ ಸಂಬಂಧ ಆರ್ಥಿಕ ಇಲಾಖೆ ಮಂಗಳವಾರ ಆದೇಶವನ್ನು ಹೊರಡಿಸಿದ್ದು, ಇದರಿಂದ ವೇತನ ಮತ್ತು ಪಿಂಚಣಿ ಕಡಿತವಾಗಬಹುದು ಎಂಬ ನೌಕರರ ಆತಂಕ ದೂರವಾಗಿದೆ.
ವಿವಿಧ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳು ಕಾರ್ಯದರ್ಶಿಗಳಿಗೆ ಈ ಸಂಬಂಧ ಸೂಚನೆ ನೀಡಿದ್ದು, ಏಪ್ರಿಲ್ ತಿಂಗಳ ಸಂಬಳವನ್ನು ನೀಡಲು ವ್ಯವಸ್ಥೆ ಮಾಡಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.
ವಿವಿಧ ಇಲಾಖೆಗಳಲ್ಲಿ ಸಂಬಳ ಮತ್ತು ಪಿಂಚಣಿಗಾಗಿ ನಿಗದಿ ಮಾಡಿ ಇಟ್ಟಿರುವ ಹಣವನ್ನು ಬಳಸಬೇಕು. ಅಲ್ಲದೆ ಖಜಾನೆಗಳಲ್ಲಿ ಯಾವುದೇ ತಿಂಗಳ ಸಂಬಳದ ಹಣವನ್ನು ಬಾಕಿ ಇಟ್ಟುಕೊಳ್ಳುವಂತಿಲ್ಲ. ಆಡಳಿತ ಇಲಾಖೆ ಮಾರ್ಚ್ ತಿಂಗಳ ಸಂಬಳ ಪಾವತಿ ಮಾಡಿಲ್ಲವಾದರೆ, ಆ ಹಣ ಪಡೆದುಕೊಳ್ಳಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಣಕಾಸು ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಿ, ಪೂರ್ಣ ಸಂಬಳ, ಪಿಂಚಣಿ ಪಾವತಿ ಮಾಡುವಂತೆ ಕಟ್ಟಪ್ಪಣೆ ಮಾಡಿದರು ಎಂದು ಮೂಲಗಳು ಹೇಳಿವೆ.