ಮುಂಡಗೋಡ: ಬೆಳಿಗ್ಗೆಯಿಂದ ಒಂದೇ ಸಮನೆ ಮಳೆ ಸುರಿಯುತ್ತಿದ್ದು, ಹಲವೆಡೆ ಗದ್ದೆಗಳಲ್ಲಿ ನೀರು ಸಂಗ್ರಹಗೊಂಡಿದೆ. ಮುಂಡಗೋಡ-ಯಲ್ಲಾಪುರ ತಾಲ್ಲೂಕಿನ ಸಂಪರ್ಕ ಕೊಂಡಿಯಾಗಿರುವ, ಶಿಡ್ಲಗುಂಡಿಯ ತಾತ್ಕಾಲಿಕ ಸೇತುವೆ ನೀರಿನಲ್ಲಿ ಮುಳುಗಿ ರಸ್ತೆ ಸಂಪರ್ಕ ಕಡಿತಗೊಂಡಿದೆ.
ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಗಟಾರಗಳು ಭರ್ತಿಯಾಗಿ, ರಸ್ತೆಗಳಲ್ಲಿ ನೀರು ತುಂಬಿಕೊಂಡಿದೆ.
‘ಬೆಳಿಗ್ಗೆ 10.30ರ ನಂತರ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿರುವುದರಿಂದ ಶಿಡ್ಲಗುಂಡಿಯ ತಾತ್ಕಾಲಿಕ ಸೇತುವೆ ಮುಳುಗಡೆಯಾಗಿದೆ. ಅದಕ್ಕಿಂತ ಮುಂಚೆ ವಾಹನಗಳು ಓಡಾಟ ನಡೆಸಿದ್ದವು. ಈಗ ರಸ್ತೆ ಸಂಪರ್ಕ ಕಡಿತಗೊಂಡಿದೆ’ಎಂದು ಸ್ಥಳೀಯ ನಿವಾಸಿ ಪ್ರಕಾಶ ಮಹಾಲೆ ಹೇಳಿದರು.