ಬೆಂಗಳೂರು:ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿಹೈಕೋರ್ಟ್ ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ನಿಗದಿಪಡಿಸಿರುವ ಮಾರ್ಗಸೂಚಿಯನ್ನು ಇದೇ 15 ರಿಂದ ಜಾರಿಗೆ ಬರುವಂತೆ ಮಾರ್ಪಾಡು ಮಾಡಲಾಗಿದೆ.
ಏಪ್ರಿಲ್ 15ರಿಂದ ಎರಡು ವಾರಗಳ ಅವಧಿಗೆ ಮಾತ್ರ ಒಂದು ಕೋರ್ಟ್ನಲ್ಲಿ ದಿನಕ್ಕೆ ಬೆಳಗಿನ ಅವಧಿಯಲ್ಲಿ 10 ಮತ್ತು ಮಧ್ಯಾಹ್ನದ ಅವಧಿಯಲ್ಲಿ 10 ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುವುದು.
ವಕೀಲರು ವಾದ ಮಂಡನೆಗೆ ಇಚ್ಛಿಸಿದರೆ ವಿಡಿಯೊ ಕಾನ್ಫರೆನ್ಸ್ ಸೌಲಭ್ಯ ಕಲ್ಪಿಸಲಾಗುವುದು. ಕೋರ್ಟ್ ಆವರಣಕ್ಕೆ ವಾದ ಮಂಡಿಸಲಿರುವ ವಕೀಲರನ್ನು ಹೊರತುಪಡಿಸಿ, ಇತರರಿಗೆ ಪ್ರವೇಶವಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಮುಂದಿನ ಎರಡು ವಾರಗಳ ಪರಿಸ್ಥಿತಿ ಅವಲೋಕಿಸಿ ಮಾರ್ಗಸೂಚಿ ಮಾರ್ಪಾಡು ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಹೈಕೋರ್ಟ್ ಪ್ರಕಟಣೆ ತಿಳಿಸಿದೆ.