ಬೆಂಗಳೂರು: ‘ನಗರದಲ್ಲಿರುವ ನಿರ್ಗತಿಕರು, ನಿರಾಶ್ರಿತರು, ಅಶಕ್ತರು ಮತ್ತು ಕಾರ್ಮಿಕರನ್ನು ಶನಿವಾರ (ಏ.25) ಸಂಜೆ ವೇಳೆಗೆ ಪತ್ತೆ ಹಚ್ಚಬೇಕು’ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹೈಕೋರ್ಟ್ ತಾಕೀತು ಮಾಡಿದೆ.
ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ‘ನಗರ ವ್ಯಾಪ್ತಿಯ ಎಂಟು ವಲಯಗಳ ನಿರಾಶ್ರಿತರು ಹಾಗೂ ಕಾರ್ಮಿಕರನ್ನು ಪತ್ತೆ ಹಚ್ಚುವ ಜವಾಬ್ದಾರಿಯನ್ನು ಆಯಾ ವಲಯಗಳ ಜಂಟಿ ಆಯುಕ್ತರಿಗೆ ವಹಿಸಲಾಗಿದೆ’ ಎಂದು ತಿಳಿಸಿದರು.
ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಎಲ್ಲ ಕಾರ್ಮಿಕರಿಗೆ ಆಹಾರ ಪೂರೈಸಬೇಕು ಮತ್ತು ಆರೋಗ್ಯ ತಪಾಸಣೆ ನಡೆಸಬೇಕು. ಈ ಕುರಿತ ವರದಿಯನ್ನು ಶನಿವಾರ ಕೋರ್ಟ್ ಗೆ ಸಲ್ಲಿಸಬೇಕು’ ಎಂದು ನಿರ್ದೇಶಿಸಿತು.