ಬೆಂಗಳೂರು: ಜೂನ್ 1ರಿಂದ ಕೋರ್ಟ್ ಕಲಾಪಗಳನ್ನು ಪುನಃ ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ವಕೀಲರ ಸಂಘಗಳ ಪದಾಧಿಕಾರಿಗಳ ಜೊತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್.ಓಕಾ ಹಾಗೂ ಹಿರಿಯ ನ್ಯಾಯಮೂರ್ತಿಗಳು ವಿಡಿಯೊ ಕಾನ್ಫರೆನ್ಸ್ ಮೂಲಕ ಚರ್ಚಿಸಿದರು.
ರಾಜ್ಯ ವಕೀಲರ ಪರಿಷತ್, ಬೆಂಗಳೂರು ವಕೀಲರ ಸಂಘವೂ ಸೇರಿದಂತೆ ರಾಜ್ಯದ ವಕೀಲರ ಸಂಘಗಳ ಪದಾಧಿಕಾರಿಗಳ ಜೊತೆ ಗುರುವಾರ ಈ ಸಭೆ ನಡೆಯಿತು.
ಸಭೆಯಲ್ಲಿ ಕೋರ್ಟ್ ಕಲಾಪ ನಡೆಸುವ ಬಗ್ಗೆ ಸಿದ್ಧಪಡಿಸಿರುವ ಮಾರ್ಗಸೂಚಿಗಳ ಬಗ್ಗೆ ವಕೀಲರ ಸಲಹೆ ಮತ್ತು ಅಹವಾಲುಗಳನ್ನು ನ್ಯಾಯಮೂರ್ತಿಗಳು ಆಲಿಸಿದರು.
ಮೊದಲಿನಂತೆಯೇ ಕೋರ್ಟ್ ಕಲಾಪ ಆರಂಭಿಸಲು ಬಹುತೇಕ ವಕೀಲ ಸಂಘಗಳ ಪ್ರತಿನಿಧಿಗಳು ಮನವಿ ಮಾಡಿದರು.
ಅಂತೆಯೇ, 'ಕಲಾಪ ನಡೆಸಲು ಅಗತ್ಯ ಸಹಕಾರ ನೀಡಬೇಕು' ಎಂದು ಮುಖ್ಯ ನ್ಯಾಯಮೂರ್ತಿಗಳು ಪದಾಧಿಕಾರಿಗಳನ್ನು ಕೋರಿದರು.
ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಜೆ.ಎಂ.ಅನಿಲ್ ಕುಮಾರ ಹಾಗೂ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಭಾಗಿಯಾಗಿದ್ದರು.