ಮಡಿಕೇರಿ: ಇಲ್ಲಿನ ಚಾಮುಂಡೇಶ್ವರಿ ಹಾಗೂ ಇಂದಿರಾ ನಗರದ ಕೆಲವು ನಿವಾಸಿಗಳು ಮುಂಗಾರು ಮಳೆ ಅಬ್ಬರಿಸುವ ಮೊದಲೇ ಮನೆ ಖಾಲಿ ಮಾಡಿ ಸುರಕ್ಷಿತ ಸ್ಥಳಕ್ಕೆ ತೆರಳಲು ನಿರ್ಧರಿಸಿದ್ದಾರೆ.
ಮಳೆ, ಗಾಳಿಯ ಭೀತಿಯಿಂದ ಬುಧವಾರ ಬೆಳಿಗ್ಗೆ ಜಾನಕಿ ಅವರು ಮನೆಯ ಪೀಠೋಪಕರಣ, ಬಟ್ಟೆ, ಪಾತ್ರೆಗಳನ್ನು ವಾಹನಕ್ಕೆ ತುಂಬಿಸಿಕೊಂಡು ಸ್ವಂತ ಮನೆಗಳನ್ನು ಬಿಟ್ಟು ಬಾಡಿಗೆ ಮನೆ ಸೇರಿದರು. 2018ರ ಮಳೆಗಾಲದಲ್ಲಿ ಈ ಬಡಾವಣೆಗಳಲ್ಲಿ ಭೂಕುಸಿತ ಸಂಭವಿಸಿದ್ದ ಕಾರಣ ಆತಂಕವಿದೆ.
ಅಪಾಯಕಾರಿ ಸ್ಥಳದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನಗರಸಭೆ ನೋಟಿಸ್ ನೀಡಲು ಮುಂದಾಗಿದ್ದು ನೋಟಿಸ್ ತಲುಪುವ ಮೊದಲೇ ಮುಂಜಾಗ್ರತಾ ಕ್ರಮವಾಗಿ ಕೆಲವರು ಪರ್ಯಾಯ ಸ್ಥಳಕ್ಕೆ ತೆರಳಲು ತೀರ್ಮಾನಿಸಿದ್ದಾರೆ.
‘ಪ್ರತಿವರ್ಷ ಸುರಕ್ಷಿತ ಪ್ರದೇಶಕ್ಕೆ ತೆರಳುವಂತೆ ಸೂಚನೆ ನೀಡಿದರೂ ಪಾಲನೆ ಆಗುತ್ತಿರಲಿಲ್ಲ. ಆದರೆ, ಎರಡು ವರ್ಷಗಳ ಹಿಂದೆ ಸಂಭವಿಸಿದ ದುರಂತದಿಂದ ಹೆದರಿ ಜನರೇ ಮನೆ ಖಾಲಿ ಮಾಡುತ್ತಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಶೀತ ಹೆಚ್ಚಾದರೆ ಮನೆಯ ಗೋಡೆಯಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ನಮಗೆ ನೋಟಿಸ್ ಕೊಡದಿದ್ದರೂ ಸ್ವಯಂ ಪ್ರೇರಿತವಾಗಿ ಬೇರೆ ಕಡೆಗೆ ಹೋಗುತ್ತಿದ್ದೇವೆ. ಮನೆಯಲ್ಲಿ ಚಿಕ್ಕ ಮಕ್ಕಳು ಹಾಗೂ ವೃದ್ಧರು ಇದ್ದಾರೆ. ಮನೆಯ ಸುತ್ತಲೂ ಗುಡ್ಡವಿದ್ದು ಮಳೆ ಹೆಚ್ಚಾದರೆ ಯಾವಾಗ ಬೇಕಾದರೂ ಅನಾಹುತ ಸಂಭವಿಸುವ ಸಾಧ್ಯತೆ ಇದೆ’ ಎಂದು ನಿವಾಸಿ ಜಾನಕಿ ಅಳಲು ತೋಡಿಕೊಂಡರು.