ಬೆಂಗಳೂರು: ನಂದಿನಿ ಹಾಲು ಮತ್ತು ಮೊಸರಿನ ದರಲೀಟರ್ಗೆ ₹ 2 ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದ್ದು, ಪರಿಷ್ಕೃತ ದರ ಫೆಬ್ರುವರಿ 1ರಿಂದ ಜಾರಿಗೆ ಬರಲಿದೆ.
ಹೆಚ್ಚಳವಾದ ₹2ರಲ್ಲಿ ₹1 ನೇರವಾಗಿ ರೈತರಿಗೆ ಸೇರಲಿದೆ. 40 ಪೈಸೆ ಹಸುಗಳ ವಿಮೆ ಮಾಡಿಸಲು ರೈತರಿಗೇ ನೀಡಲಾಗುತ್ತದೆ. ಹಾಲು ಮಾರಾಟ ಮಾಡುವವರಿಗೆ ಕಮಿಷನ್ ರೂಪದಲ್ಲಿ 40 ಪೈಸೆ ಸೇರಲಿದೆ. ಉಳಿದ 20 ಪೈಸೆ ಹಾಲು ಸಹಕಾರ ಸಂಘಗಳಲ್ಲಿ ಕೆಲಸ ಮಾಡುವವರಿಗೆ ಪ್ರೊತ್ಸಾಹಧನವಾಗಿ ನೀಡಲು ನಿರ್ಧರಿಸಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೂರು ವರ್ಷಗಳಿಂದ ದರ ಏರಿಕೆ ಮಾಡಿಲ್ಲ. ಹೀಗಾಗಿ, ದರದಲ್ಲಿ ₹2ರಿಂದ ₹3 ಹೆಚ್ಚಳ ಮಾಡಬೇಕು’ ಎಂಬ ಪ್ರಸ್ತಾವವನ್ನು 14 ಒಕ್ಕೂಟಗಳು ಕೆಎಂಎಫ್ಗೆ ಸಲ್ಲಿಸಿದ್ದವು. ದರ ಹೆಚ್ಚಳಕ್ಕೆ ಕೆಎಂಎಫ್ ಆಡಳಿತ ಮಂಡಳಿಯೂ ಒಪ್ಪಿಗೆ ನೀಡಿತ್ತು. ಮುಖ್ಯಮಂತ್ರಿ ಅವರೂ ಇದೀಗ ಒಪ್ಪಿಗೆ ನೀಡಿದ್ದಾರೆ.