ಬಳ್ಳಾರಿ: ‘ಸಂವಿಧಾನ ಮತ್ತು ಬಿ.ಆರ್.ಅಂಬೇಡ್ಕರ್: ಸಮಗ್ರ ರಾಷ್ಟ್ರಾಭಿವೃದ್ಧಿ’ ಕುರಿತು ನಗರದಲ್ಲಿ ಸೆಪ್ಟೆಂಬರ್ 1 ರಂದುವಿಚಾರ ಸಂಕಿರಣ ನಡೆಯಲಿದೆ ಎಂದು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿಯ ರಾಜ್ಯ ಘಟಕದ ಉಪಾಧ್ಯಕ್ಷ ಜಿ.ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಕ್ರೀಡಾಂಗಣ ಸಂಕೀರ್ಣದ ಸಭಾಂಗಣದಲ್ಲಿ ಬಳ್ಳಾರಿ ಐಜಿಪಿ ಎಂ.ನಂಜುಂಡಸ್ವಾಮಿ ಸಂಕಿರಣವನ್ನು ಉದ್ಘಾಟಿಸಲಿದ್ದಾರೆ. ಅಕಾಡೆಮಿ ಅಧ್ಯಕ್ಷ ಚೆಲುವರಾಜು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ನಂತರ, ಸಂವಿಧಾನ- ರಾಷ್ಟ್ರಾಭಿವೃದ್ಧಿ ಕುರಿತು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಆರ್.ಮೋಹನ ರಾಜ್, ಸಂವಿಧಾನ- ಮಹಿಳಾ ಸಬಲೀಕರಣ ಕುರಿತು ಅಕಾಡೆಮಿ ಉಪಾಧ್ಯಕ್ಷೆ ಎನ್.ಡಿ.ವೆಂಕಮ್ಮ, ಸಂವಿಧಾನ- ಜನಸಾಮಾನ್ಯರ ಕುರಿತು ಲೇಖಕ ವೆಂಕಟಗಿರಿ ದಳವಾಯಿ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಂಜೆ ನಡೆಯಲಿರುವ ಸಮಾರೋಪದಲ್ಲಿ ಅಕಾಡೆಮಿಯ ರಾಷ್ಟ್ರೀಯ ಕಾರ್ಯದರ್ಶಿ ಸುಭಾಷ್ ಎಚ್.ಕಾನಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಲೇಖಕ ಅಪ್ಪಗೆರೆ ವೆಂಕಟಯ್ಯ ಮತ್ತು ವೆಂಕಮ್ಮ ಉಪಸ್ಥಿತರಿದ್ದರು.