ಹರಪನಹಳ್ಳಿ: ಪಟ್ಟಣದ ಉಪ್ಪಾರಗೇರಿಯ ಇಂದಿರಾ ಗಾಂಧಿ ವಸತಿ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಂ. ವೀರಭದ್ರಯ್ಯ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.
‘ಪ್ರಜಾವಾಣಿ’ ಪತ್ರಿಕೆಯ ಸೋಮವಾರದ ಸಂಚಿಕೆಯಲ್ಲಿ ‘ಶೆಡ್ನಲ್ಲಿಯೇ ವಸತಿ ಶಾಲೆ’ ಶೀರ್ಷಿಕೆಯಡಿ ವಸತಿ ಶಾಲೆಯ ಸಮಸ್ಯೆಗಳ ಬಗ್ಗೆ ವಿಶೇಷ ವರದಿ ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಇಒ ಅವರು ಸ್ಥಳಕ್ಕೆ ಬಂದು ಶಾಲೆಯಲ್ಲಿರುವ ತರಗತಿಗಳನ್ನು ಪರಿಶೀಲಿಸಿದರು. ಶಿಕ್ಷಕರು, ಸಿಬ್ಬಂದಿ ಸಂದರ್ಶನ ನಡೆಸಿ ಶಾಲೆಯ ಸಂಪೂರ್ಣ ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಅವರು, ‘ಮೇಲಧಿಕಾರಿಗಳ ಆದೇಶದಂತೆ ವಸತಿ ಶಿಕ್ಷಣ ಸಂಸ್ಥೆಗಳ ಆಡಳಿತ ವ್ಯಾಪ್ತಿಗೆ ಬರುವ ಇಂದಿರಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿದ್ದೇನೆ. ಅಲ್ಲಿನ ವಾಸ್ತವ ಅಂಶಗಳನ್ನು ಸಂಗ್ರಹಿಸಿದ್ದು, ವರದಿಯನ್ನು ಹಿರಿಯ ಅಧಿಕಾರಿಗಳಿಗೆ ಕಳುಹಿಸಿಕೊಡುತ್ತೇನೆ’ ಎಂದು ತಿಳಿಸಿದರು.