ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ‘ಚಂದ್ರಯಾನ–2’ ಚಂದ್ರನ ಅಂಗಳಕ್ಕೆ ತಲುಪುವಲ್ಲಿ ಶುಕ್ರವಾರ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ.
ಲ್ಯಾಂಡರ್ ಮತ್ತು ರೋವರ್ ಅನ್ನು ಹೊತ್ತಿರುವ ಬಾಹ್ಯಾಕಾಶ ನೌಕೆ ‘ಬಾಹುಬಲಿ’ಯನ್ನು ಮತ್ತೊಂದು ಹಂತದ ಕಕ್ಷೆಗೆ ಯಶಸ್ವಿಯಾಗಿ ಏರಿಸಲಾಗಿದೆ. ಇದರಿಂದ ನೌಕೆಯು ಚಂದ್ರನಿಗೆ ಇನ್ನಷ್ಟು ಸನಿಹವಾಗಿದೆ. ಈ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವುದಾಗಿ ಇಸ್ರೊ ಟ್ವಿಟ್ ಮಾಡಿದೆ.
ಶುಕ್ರವಾರ ಮಧ್ಯಾಹ್ನ 3.27 ಕ್ಕೆ ಸರಿಯಾಗಿ 646 ಸೆಕೆಂಡುಗಳ ಕಾಲ ಎಂಜಿನ್ ಆನ್ ಮಾಡಿ ನೌಕೆಯನ್ನು ಮುಂದೂಡುವ ಮೂಲಕ ನಾಲ್ಕನೇ ಬಾರಿ ಕಕ್ಷೆಯನ್ನು ಹೆಚ್ಚಿಸುವ ಕಾರ್ಯ ನಡೆಯಿತು. ಭೂಮಿಯಿಂದ 277 x 89,472 ಕಿ.ಮೀ ದೂರಕ್ಕೆ ಸಾಗಿದೆ. ಬಾಹ್ಯಾಕಾಶ ನೌಕೆ ಸುಸ್ಥಿತಿಯಲ್ಲಿದೆ ಎಂದು ಇಸ್ರೊ ತಿಳಿಸಿದೆ.
ಜುಲೈ 22 ರಂದು ಚಂದ್ರಯಾನ–2 ನೌಕೆಯನ್ನು ಶ್ರೀಹರಿಕೋಟದಿಂದ ಉಡಾವಣೆ ಮಾಡಲಾಗಿತ್ತು. ಸೆಪ್ಟಂಬರ್ 7 ರಂದು ಚಂದ್ರನ ಮೇಲ್ಮೈ ತಲುಪಲಿದೆ. ಆಗಸ್ಟ್ 20 ರಂದು ಭೂಕಕ್ಷೆಯಿಂದ ಚಂದ್ರನ ಕಕ್ಷೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆಯಲಿದೆ.
ನೌಕೆ ಚಂದ್ರನ ಕಕ್ಷೆ ಸೇರುತ್ತಿದಂತೆ ಮಹತ್ವದ ಚಟುವಟಿಕೆಗಳು ಆರಂಭಗೊಳ್ಳಲಿವೆ. ಇದು ಅತ್ಯಂತ ಕುತೂಹಲದ ವಿದ್ಯಮಾನ ಎಂದು ಇಸ್ರೋ ಹೇಳಿದೆ.