ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ.ಟಿ ದಾಳಿಯಲ್ಲಿ ಲೆಕ್ಕವಿಲ್ಲದ ಹಣ ಪತ್ತೆ ಪ್ರಕರಣ: ಸಚಿವ ಡಿಕೆಶಿ ಅರ್ಜಿ ವಜಾ

Last Updated 25 ಜೂನ್ 2019, 18:33 IST
ಅಕ್ಷರ ಗಾತ್ರ

ಬೆಂಗಳೂರು: ‘ನವದೆಹಲಿಯ ಮನೆಗಳಲ್ಲಿ ದೊರೆತ ₹ 8.60 ಕೋಟಿಯಷ್ಟು ಲೆಕ್ಕವಿಲ್ಲದ ಹಣ ಪತ್ತೆ ಪ್ರಕರಣದ ಆರೋಪದಿಂದ ತನ್ನನ್ನು ಕೈಬಿಡಬೇಕು’ ಎಂದು ಕೋರಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ಕೋರ್ಟ್ ವಜಾ ಮಾಡಿದೆ.

ಈ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ‘ಶಾಸಕರು, ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ’ದ ನ್ಯಾಯಾಧೀಶ ರಾಮಚಂದ್ರ ಡಿ.ಹುದ್ದಾರ ಮಂಗಳವಾರ ಸಂಜೆ 5.20ಕ್ಕೆ ಪ್ರಕಟಿಸಿದರು.

ಇದರಿಂದಾಗಿ ಶಿವಕುಮಾರ್ ಸೇರಿದಂತೆ ಸಚಿನ್‌ ನಾರಾಯಣ್, ಸುನಿಲ್ ಕುಮಾರ್ ಶರ್ಮ, ಎನ್‌.ರಾಜೇಂದ್ರ ಮತ್ತು ಆಂಜನೇಯ ಹನುಮಂತಯ್ಯ ವಿರುದ್ಧ ಇದೇ ನ್ಯಾಯಾಲಯ ದೋಷಾರೋಪ ಹೊರಿಸಿ ವಿಚಾರಣೆ ನಡೆಸುವ ಪ್ರಕ್ರಿಯೆ ಆರಂಭಿಸಲಿದೆ.

ಈ ಹಿಂದೆ ಇದೇ ಪ್ರಕರಣದಲ್ಲಿ ಶಿವಕುಮಾರ್ ಅವರನ್ನು ಈ ಹಿಂದಿನ ನ್ಯಾಯಾಧೀಶ ಬಿ.ವಿ.ಪಾಟೀಲ ಪ್ರಕರಣದಿಂದ ಮುಕ್ತಿ ನೀಡಿ ಆದೇಶಿಸಿದ್ದರು.

ಅಪರಾಧಿಕ ಒಳಸಂಚು: ‘ಆದಾಯ ತೆರಿಗೆ ಇಲಾಖೆಯು ದಾಖಲಿಸಿರುವ ಈ ದೂರು, ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 120–‘ಬಿ’ (ಅಪರಾಧಿಕ ಒಳಸಂಚು) ಅನುಸಾರ ಸರಿಯಾಗಿಯೇ ಇದೆ. ಇದರಲ್ಲಿ ಲೋಪವಿಲ್ಲ’ ಎಂಬ ಆದಾಯ ತೆರಿಗೆ ಇಲಾಖೆ ವಾದವನ್ನು ನ್ಯಾಯಾಧೀಶರುಪುರಸ್ಕರಿಸಿದ್ದಾರೆ.

‘ಶಿವಕುಮಾರ್ ಅವರು, ಆದಾಯ ತೆರಿಗೆ ಕಾಯ್ದೆ–1961ರ ಕಲಂ 276 ಸಿ (1) ಮತ್ತು 277ರ ಪ್ರಕಾರ ದಂಡನೀಯ ಅಪರಾಧ ಎಸಗಿದ್ದಾರೆ. ತನಿಖೆಯ ವೇಳೆ ಇನ್ನಷ್ಟು ಅಪರಾಧಗಳು ಬೆಳಕಿಗೆ ಬರಬಹುದು’ ಎಂಬುದು ಐ.ಟಿ. ವಾದ.

ಆದೇಶ ಕುರಿತಂತೆ ‘ಪ್ರಜಾವಾಣಿ‘ಗೆ ಪ್ರತಿಕ್ರಿಯಿಸಿದ ಐ.ಟಿ‌ ಪರ ವಾದ ಮಂಡಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಅವರು, ‘ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವುದರಿಂದ ಪ್ರಕರಣದ ಸಮಗ್ರ ವಿಚಾರಣೆ ನಡೆಸಲು ಕೋರ್ಟ್ ತೀರ್ಮಾನಿಸಿರುವುದು ಸ್ವಾಗತಾರ್ಹ’ ಎಂದರು.

ಆದೇಶದಲ್ಲಿರುವ ಪ್ರಮುಖ ಅಂಶಗಳು

* ಶಿವಕುಮಾರ್‌ ಹೊರತುಪಡಿಸಿದಂತೆ ಉಳಿದ ಆರೋಪಿಗಳು ಹಣ ಶಿವಕುಮಾರ್‌ ಅವರಿಗೇ ಸೇರಿದ್ದೆಂದು ಐ.ಟಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ.

*ಇದು ಆರೋಪಿಗಳೇ ಒಪ್ಪಿಕೊಂಡಿರುವ ಸಾಕ್ಷ್ಯ. ಹೀಗಾಗಿ ಇದು ವಿಚಾರಣೆಗೆ ಯೋಗ್ಯವಾಗಿದೆ.

* ಐ.ಟಿ. ಅಧಿಕಾರಿಗಳು ಕಪ್ಪು ಹಣ ಪತ್ತೆ ಮಾಡುವಾಗ ನಡೆಸುವ ದಾಳಿ ಪ್ರಕ್ರಿಯೆಯನ್ನು ಹೇಗೆ ನಡೆಸಬೇಕೋ ಆ ರೀತಿಯಲ್ಲೇ ಈ ಪ್ರಕರಣದಲ್ಲೂ ಕಾನೂನು ಬದ್ಧವಾಗಿ ನಡೆದುಕೊಂಡಿದ್ದಾರೆ.

* ಶಿವಕುಮಾರ್‌ ಅವರ ಆದಾಯ ತೆರಿಗೆ ವಿವರ ಸಲ್ಲಿಕೆಯಲ್ಲಿ ಕಳೆದ ವರ್ಷದ ಮೊತ್ತಕ್ಕೂ ಮತ್ತು ಈ ವರ್ಷದ ಮೊತ್ತಕ್ಕೂ ಅಜಗಜ ಅಂತರವಿದ್ದು ಅನುಮಾನಕ್ಕೆ ಕಾರಣವಾಗುತ್ತದೆ.

* ಹಣ ಶಿವಕುಮಾರ್ ಅವರಿಗೆ ಸೇರಿದ್ದು ಹೌದೋ ಅಲ್ಲವೋ ಎಂಬುದು ಪಾಟೀ ಸವಾಲಿನಲ್ಲೇ ಸಾಬೀತಾಗಲಿ.

**

ಶಿವಕುಮಾರ್ ಮತ್ತು ಇತರರನ್ನು ಈ ಹಂತದಲ್ಲಿ ಆರೋಪಿಗಳಲ್ಲ ಎಂದು ಕೈಬಿಡುವುದು ಸರಿಯಲ್ಲ. ವಿಚಾರಣೆ ನಡೆದ ಮೇಲೆ ಸತ್ಯ ತಿಳಿದೇ ತಿಳಿಯುತ್ತದೆ.
- ರಾಮಚಂದ್ರ ಡಿ. ಹುದ್ದಾರ,ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT