ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಶಾಸಕರ ಸಭೆ ವಿಳಂಬ

ಗೋವಾದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಜನ್ಮದಿನ ಆಚರಣೆ ಇಂದು
Last Updated 15 ಡಿಸೆಂಬರ್ 2019, 19:43 IST
ಅಕ್ಷರ ಗಾತ್ರ

ಬೆಂಗಳೂರು: ಅರವತ್ತನೇ ಜನ್ಮದಿನವನ್ನು ಸೋಮವಾರ ಗೋವಾದಲ್ಲಿ ಆಚರಿಸುತ್ತಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷದ ಶಾಸಕರನ್ನು ಸಮಾಧಾನಪಡಿಸುವ ಸಭೆ ನಡೆಸುವುದಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ.

ರಕ್ತದ ಸೋಂಕಿಗೆ ತುತ್ತಾಗಿರುವ ಕುಮಾರಸ್ವಾಮಿ ಅವರಿಗೆ 10 ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದರು. ಹೀಗಾಗಿ ಉಪಚುನಾವಣಾ ಫಲಿತಾಂಶ ಬಂದ ದಿನದಿಂದಲೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಆದರೆ ಶುಕ್ರವಾರ ತಮ್ಮ ಜೆ.ಪಿ.ನಗರದ ನಿವಾಸದಲ್ಲಿ ಷಷ್ಠ್ಯಬ್ದ ಪೂರ್ತಿ ಕಾರ್ಯಕ್ರಮ ಆಯೋಜಿಸಿ, ಕೆಲವು ಶಾಸಕರನ್ನು ಭೇಟಿ ಮಾಡಿದ್ದರು. ಚುನಾವಣಾ ಫಲಿತಾಂಶದಿಂದ ಕಂಗೆಟ್ಟಿರುವ ಹಾಗೂ ಅಸಮಾಧಾನಗೊಂಡಿರುವ ಹೆಚ್ಚಿನ ಶಾಸಕರು ಅಂದು ಕುಮಾರಸ್ವಾಮಿ ಮನೆಗೆ ಬಂದಿರಲಿಲ್ಲ.

ಪಕ್ಷದಿಂದ ಮಾನಸಿಕವಾಗಿ ದೂರವಾಗುತ್ತಿರುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಮಂಗಳವಾರದ ಒಳಗೆಯೇ ಸಭೆ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಸಭೆ ವಿಳಂಬ
ವಾಗಲಿದ್ದು, ಈ ಸಭೆಗಾಗಿ ಇದೇ 21ರವರೆಗೂ ಕಾಯಬೇಕಾಗಬಹುದು ಎಂದು ಪಕ್ಷದ ಮೂಲಗಳು ತಿಳಿಸಿವೆ.

ಈ ಮಧ್ಯೆ, ಕೆ.ಆರ್‌.ಪೇಟೆ, ಯಶವಂತಪುರಗಳಂತಹ ಪ್ರಮುಖ ಕ್ಷೇತ್ರಗಳಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸುವ ನೆಪದಲ್ಲಿ ಸೋಲಿನ ಆತ್ಮವಿಮರ್ಶೆ ನಡೆಸುವ ಪ್ರಯತ್ನವೂ ಆರಂಭವಾಗಿದೆ. ಪಕ್ಷವನ್ನು ಮುನ್ನಡೆಸಲು ಇನ್ನಷ್ಟು ಸಂಘಟನಾ ಶಕ್ತಿ ಹೊಂದಿರುವ ವ್ಯಕ್ತಿಯೇ ಬೇಕು, ಎಚ್‌.ಡಿ.ಕುಮಾರಸ್ವಾಮಿ ಅವರೇ ಮತ್ತೆ ಪಕ್ಷದ ರಾಜ್ಯ ಘಟಕದ ನೇತೃತ್ವ ವಹಿಸಿ ಹೊಸ ಚೈತನ್ಯ ತುಂಬುವ ಪ್ರಯತ್ನ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.

ಕಾಂಗ್ರೆಸ್‌ ನಂಟಿಗೆ ತೆತ್ತ ಬೆಲೆ?: ಉಪಚುನಾವಣೆ ಸಂದರ್ಭದಲ್ಲಿ ಪಕ್ಷಕ್ಕೆ ಒಂದು ನಿರ್ದಿಷ್ಟ ನಿಲುವು ತಳೆಯು
ವುದು ಸಾಧ್ಯವಾಗಲಿಲ್ಲ, ಅತಂತ್ರ ಸ್ಥಿತಿ ನಿರ್ಮಾಣವಾದರೆ ಮತ್ತೆ ಕಾಂಗ್ರೆಸ್ ಸಖ್ಯ ಮಾಡುವ ಸಾಧ್ಯತೆಯೂ ಇಲ್ಲದಿಲ್ಲ ಎಂಬ ಸಂದೇಶ ರವಾನೆಯಾದುದು ಪಕ್ಷಕ್ಕೆ ಆದ ದೊಡ್ಡ ಹೊಡೆತ ಎಂದು ಹೇಳಲಾಗುತ್ತಿದೆ. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದ
ರಾಮಯ್ಯ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದಾಗ ಹಲವು ಬಿಜೆಪಿ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದರೂ, ಜೆಡಿಎಸ್‌ ಪ್ರಮು
ಖರು ಬಾರದೆ ಇರಲು ಕಾರಣ ಏನಿರಬಹುದು ಎಂಬ ಪ್ರಶ್ನೆಯೂ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಪಕ್ಷದ ಪುನಶ್ಚೇತನ ನಿಶ್ಚಿತ

‘ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷವನ್ನು ಮತ್ತೆ ಕಟ್ಟಿ ಬೆಳೆಸುವ ಸಂಪೂರ್ಣ ವಿಶ್ವಾಸ ಇದೆ, ವೈದ್ಯರ ಸಲಹೆ ಮೇರೆಗೆ ವಿಶ್ರಾಂತಿಯಲ್ಲಿದ್ದು, ಗೋವಾಕ್ಕೆ ತೆರಳಿರುವುದು ಸಹ ವಿಶ್ರಾಂತಿಗಾಗಿಯೇ. ಮಂಗಳವಾರ ಅವರು ನಗರಕ್ಕೆ ವಾಪಸಾಗಲಿದ್ದಾರೆ. ಬಳಿಕ ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲಿದ್ದಾರೆ. ಅಸಮಾಧಾನಗೊಂಡಿರುವ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಗ್ಗಟ್ಟಿನಿಂದ ಮುನ್ನಡೆಯುವ ನಿಟ್ಟಿನಲ್ಲಿ ಅವರು ಈಗಾಗಲೇ ಯೋಜನೆ ರೂಪಿಸಿದ್ದು, ಅದನ್ನು ಕಾರ್ಯಗತಗೊಳಿಸಲಿದ್ದಾರೆ’ ಎಂದು ಅವರ ಆಪ್ತರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT