ಬಾಗಲಕೋಟೆ:ಜಮಖಂಡಿ ಉಪಚುನಾವಣೆಯಲ್ಲಿ ತಾಲ್ಲೂಕಿನ ಸಿದ್ದಾಪುರದಲ್ಲಿ 33 ಮಂದಿ ಅಂಗವಿಕಲರು ಇದ್ದು, ಬೆಳಿಗ್ಗೆ 10ಗಂಟೆಗೆ 16 ಮಂದಿ ಅಂಗವಿಕಲರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಅಂಗವಿಕಲರನ್ನು ಮತಗಟ್ಟೆಗೆ ಕರೆತರಲು ಜಿಲ್ಲಾಡಳಿತ ಉಚಿತವಾಗಿ ವಾಹನ ವ್ಯವಸ್ಥೆ ಮಾಡಿದೆ. ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿ ಆಟೊ, ಟಂಟಂ, ಅಪೆ ವಾಹನಗಳಲ್ಲಿ ಕರೆತಂದು ಮತ ಹಾಕಿಸಿದರು. ಈ ಬಗೆಯ ವ್ಯವಸ್ಥೆ ಕಲ್ಪಿಸಿರುವುದು ದೇಶದಲ್ಲೇ ಮೊದಲು.
ಸಿದ್ದಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಗೆ ಅಂಗವಿಕಲರನ್ನು ಕರೆತರುವ ಹೊಣೆಯನ್ನು ಗ್ರಾಮ ಪಂಚಾಯ್ತಿ ಸಿಬ್ಬಂದಿಗೆ ವಹಿಸಲಾಗಿತ್ತು. ಆಟೊ ರಿಕ್ಷಾದಲ್ಲಿ ಕರೆತಂದು ಮತ ಹಾಕಿಸುತ್ತಿದ್ದೇವೆ. ಯಾರನ್ನೂ ಬಿಡದೇ ಎಲ್ಲಾ ಅಂಗವಿಕಲರಿಂದಲೂ ಮತ ಹಾಕಿಸುವಂತೆ ಪಿಡಿಒ ಸೂಚಿಸಿದ್ದಾರೆ. ಅದನ್ನು ಪಾಲಿಸುತ್ತಿರುವುದಾಗಿ ಬಿಲ್ ಕಲೆಕ್ಟರ್ ಶಂಕರ ಕಲ್ಲಕಂಬ 'ಪ್ರಜಾವಾಣಿ'ಗೆ ತಿಳಿಸಿದರು.
ಉಚಿತವಾಗಿ ಕಲ್ಪಿಸಿರುವ ವಾಹನದಲ್ಲಿ ಅಂಗವಿಕಲ ವ್ಯಕ್ತಿಯೊಬ್ಬರನ್ನು ಮತಗಟ್ಟೆಗೆ ಕರೆತರಲಾಯಿತು.
ಹುಲ್ಯಾಳದ ಪಿಂಕ್ ಮತಗಟ್ಟೆಯಲ್ಲಿ ಮತ ಹಾಕಲು ಬರುವವರ ಮಕ್ಕಳಿಗೆ ಆಟವಾಡಲು ಆಟಿಕೆಗಳನ್ನು ಇಡಲಾಗಿದೆ. ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ಆಟವಾಡಿಸುವ ಹೊಣೆ ಹೊತ್ತಿದ್ದಾರೆ.