ಮೈಸೂರು:ಬೆಂಗಳೂರಿನಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆ ಕೂಗಿದ ಯುವತಿಗೆ ನಕ್ಸಲರಜತೆ ಸಂಬಂಧವಿರುವುದು ಈ ಹಿಂದೆ ಸಾಬೀತಾಗಿತ್ತು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ,ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆಯಾಗಬೇಕು. ಇದರ ಹಿಂದೆಯಿರುವ ಸಂಘಟನೆಗಳ ಮೇಲೆ ಕ್ರಮ ಜರಗಿಸಲಾಗುವುದು ಎಂದರು.
ತಪ್ಪು ಮಾಡಿರುವ ಸಂಘಟನೆಗಳ ಮೇಲೆ ಕ್ರಮ ಕೈಗೊಳ್ಳದಿದ್ದರೆ ಇಂತಹ ಘಟನೆಗಳು ಕೊನೆಯಾಗುವುದಿಲ್ಲ. ಸಂಘಟನೆಗಳನ್ನು ಸರಿಯಾಗಿ ತನಿಖೆಗೆ ಒಳಪಡಿಸಿದರೆ ಅವಳಿಗೆ ಈ ರೀತಿ ಪ್ರೇರಣೆ ಕೊಟ್ಟಿರುವುದು ಯಾರೆಂಬುದು ಗೊತ್ತಾಗುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹಾಳು ಮಾಡುವಂತಹ ವ್ಯವಸ್ಥಿತ ಸಂಚು ಇದರ ಹಿಂದೆ ಇದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದರು.
‘ಅವಳ ಕೈಕಾಲು ಮುರಿಯಿರಿ, ಜಾಮೀನು ಸಿಗಬಾರದು. ನಾನು ಅವಳ ರಕ್ಷಣೆಗೆ ಹೋಗಲ್ಲ’ಎಂದು ಅವಳ ತಂದೆಯವರೇ ಹೇಳಿದ್ದಾರೆ ಎಂದು ತಿಳಿಸಿದರು.