ಬೆಂಗಳೂರು: ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗಾಗಿ ಹಣ ಸಂಗ್ರಹಿಸಿ ದುರ್ಬಳಕೆ ಮಾಡಿಕೊಂಡ ಆರೋಪದಡಿ ರೋಹನ್ ರೆಜಿ ಮ್ಯಾಥ್ಯೂ ಎಂಬಾತನನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿ ರೋಹನ್ನ ಕೃತ್ಯದ ಬಗ್ಗೆ ಸಾರ್ವಜನಿಕರೊಬ್ಬರು ಮಾಹಿತಿ ನೀಡಿದ್ದರು. ಇನ್ಸ್ಪೆಕ್ಟರ್ ಎಚ್.ಡಿ.ಕುಲಕರ್ಣಿ ನೇತೃತ್ವದ ತಂಡ, ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡ’ ಎಂದು ಪೂರ್ವ ವಿಭಾಗದ ಡಿಸಿಪಿ ರಾಹುಲ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಫೇಸ್ಬುಕ್ನಲ್ಲಿ ಖಾತೆ ತೆರೆದಿದ್ದ ಆರೋಪಿ, ‘ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ ಆರ್ಥಿಕವಾಗಿ ಸಹಾಯ ಮಾಡಬೇಕಿದೆ. ನಿಮ್ಮ ಕೈಲಾದಷ್ಟು ಸಹಾಯಮಾಡಿ’ ಎಂದು ಪ್ರಕಟಿಸಿದ್ದ. ಅದರ ಜೊತೆಗೆ, ಬ್ಯಾಂಕೊಂದರ ತನ್ನ ವೈಯಕ್ತಿಕ ಖಾತೆಯ ವಿವರವನ್ನು ನಮೂದಿಸಿದ್ದ’ ಎಂದು ಮಾಹಿತಿ ನೀಡಿದರು.
’ಆರೋಪಿಯ ಪೋಸ್ಟ್ ನಂಬಿದ್ದ ಕೆಲವರು, ಆತನ ಖಾತೆಗೆ ಹಣ ಜಮೆ ಮಾಡಿದ್ದರು. ಆ ಹಣವನ್ನೇ ಆರೋಪಿ ಸ್ವಂತಕ್ಕೆ ಬಳಸಿಕೊಂಡಿದ್ದಾನೆ’ ಎಂದು ರಾಹುಲ್ಕುಮಾರ್ ಹೇಳಿದರು. ‘ವಂಚನೆ ಆರೋಪದಡಿ ರೋಹನ್ ವಿರುದ್ಧ ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದರು.