ಶಿವಮೊಗ್ಗದ ಕುಂಬಾರ ಗುಂಡಿ ಗಣೇಶ ಮೂರ್ತಿಗಳ ಪ್ರಮುಖ ತಯಾರಿಕಾ ಪ್ರದೇಶ. ತುಂಗಾ ನದಿಯ ಉತ್ತರ ತಟದಲ್ಲಿ ಇರುವ ಬಹು ದೊಡ್ಡ ಬಡಾವಣೆಯಲ್ಲಿ ನೂರಕ್ಕೂ ಹೆಚ್ಚು ಮನೆಗಳಲ್ಲಿ ವೈವಿಧ್ಯಮಯ ವಿನಾಯಕ ಮೂರ್ತಿಗಳು ರೂಪುಗೊಳ್ಳುತ್ತವೆ. ಹಿಂದೂ ಮಹಾಸಭಾ ಸೇರಿ ವಿವಿಧ ಸಂಘ–ಸಂಸ್ಥೆಗಳು, ಸಾರ್ವಜನಿಕರು ಮೂರು, ನಾಲ್ಕು ತಿಂಗಳ ಮೊದಲೇ ಮುಂಗಡ ನೀಡುತ್ತಾರೆ. ತಮಗೆ ಬೇಕಾದ ಪರಿಕಲ್ಪನೆಯ, ಅಳತೆಯ ಮೂರ್ತಿಗಳನ್ನು ಸಿದ್ಧಪಡಿಸಲು ಕೋರುತ್ತಾರೆ. ಬೇಡಿಕೆಗೆ ಅನುಗುಣವಾಗಿ ತಯಾರಕರು ಜೇಡಿಮಣ್ಣ ಖರೀದಿಸುತ್ತಾರೆ. ನಂತರ ಹಬ್ಬದ ಎರಡು, ಮೂರು ವಾರಗಳ ಮೊದಲೇ ವಿಭಿನ್ನ ಶೈಲಿಯ, ವೈವಿಧ್ಯಮಯ ವಿನಾಯಕ ಮೂರ್ತಿಗಳು ರೂಪುಗೊಳ್ಳುತ್ತವೆ.