ಬೆಂಗಳೂರು: ಕೋವಿಡ್ -19 ರೋಗಿಗಳಿಗೆ ಆಯುರ್ವೇದ ಚಿಕಿತ್ಸೆ ಆರಂಭಿಸುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆಸೂಚಿಸಿದೆ.
ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಿರಿಯ ವೈದ್ಯ ಡಾ.ಗಿರಿಧರ ಕಜೆ ಅವರನ್ನು ತಮ್ಮ ಕಾವೇರಿ ನಿವಾಸಕ್ಕೆ ಕರೆಸಿಕೊಂಡು ಈ ವಿಷಯ ತಿಳಿಸಿದರು.
‘ಆರಂಭದಲ್ಲಿ ಹತ್ತು ಮಂದಿ ರೋಗಿಗಳಿಗೆ ಕೋವಿಡ್ ಆಸ್ಪತ್ರೆಯಲ್ಲೇ ಆಯುರ್ವೇದ ಗುಳಿಗೆ ನೀಡಲಾಗುವುದು, ಅದರ ಫಲಿತಾಂಶ ನೋಡಿಕೊಂಡು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು’ಎಂದು ಗಿರಿಧರ ಕಜೆ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ಸರ್ಕಾರದಿಂದ ಅಧಿಕೃತ ಆದೇಶ ಬಂದ ತಕ್ಷಣ ಈ ಔಷಧ ಪ್ರಯೋಗ ಆರಂಭವಾಗಲಿದೆ. ಬಹುಶಃ ಎರಡು, ಮೂರು ದಿನಗಳಲ್ಲಿ ಇದು ಆರಂಭವಾಗಬಹುದು, ಏನಿದ್ದರೂ ಸರ್ಕಾರ ಏನು ಸೂಚಿಸುತ್ತದೆಯೋ ಅದರಂತೆ ನಡೆಯಲಾಗುವುದು ಎಂದುಹೇಳಿದರು.
‘ನಾನು ಪ್ರಚಾರಕ್ಕಾಗಿ ಈ ಕೆಲಸ ಮಾಡಿಲ್ಲ, ಆಯುಷ್ ಇಲಾಖೆಯಿಂದ ನನಗೆ ನೋಟಿಸ್ ಬಂದಿಲ್ಲ, ರಾಜ್ಯ ಸರ್ಕಾರದ ಮೂಲಕ ಐಸಿಎಂಆರ್ಗೆ ಪ್ರಸ್ತಾವನೆ ಕಳುಹಿಸಲಾಗಲಾಗಿತ್ತು’ಎಂದರು.