ಬೆಂಗಳೂರು:ಸರ್ಕಾರ ಮಂಡಿಸಿದ ವಿಶ್ವಾಸ ಮತ ನಿರ್ಣಯದ ಮೇಲೆ ಮಂಗಳವಾರ ಅಂತಿಮ ಚರ್ಚೆ ನಡೆಯಲಿದೆ ಎಂದು ತೀರ್ಮಾನವಾಗಿದ್ದರೂ ಆಡಳಿತಾರೂಢ ಪಕ್ಷಗಳು ಸದನಕ್ಕೆ ಸಮಯಕ್ಕೆ ಹಾಜರಾಗದೆ ಇರುವುದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಸಭಾಧ್ಯಕ್ಷರು ಬೆಳಿಗ್ಗೆ 10 ಗಂಟೆಗೆ ಕಲಾಪಕ್ಕೆ ಹಾಜರಾಗಿದ್ದರು. ಎಲ್ಲರೂ 10 ಗಂಟೆಗೆ ಬರಬೇಕು ಎಂದು ಎಲ್ಲ ಸದಸ್ಯರಿಗೆ ಸೋಮವಾರ ಮಧ್ಯರಾತ್ರಿ ತಿಳಿಸಿದ್ದರು. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ನಬಹುತೇಕ ಸದಸ್ಯರು ಸದನಕ್ಕೆ ಸಮಯಕ್ಕೆ ಸರಿಯಾಗಿ ಬಾರದ ಕಾರಣ ಈ ಆಕ್ಷೇಪ ಕೇಳಿಬಂತು.
ಸ್ಪೀಕರ್ಗೆ ಸಮಜಾಯಿಷಿ ನೀಡಲು ಸದನದಲ್ಲಿ ಹಾಜರಿದ್ದ ಸಚಿವ ಪ್ರಿಯಾಂಕ್ ಖರ್ಗೆಗೆ ಕಷ್ಟವಾಯಿತು. ಹದಿನೈದು ನಿಮಿಷ ಕಲಾಪ ಮುಂದೂಡಲು ಮಾಡಿದ ಮನವಿಯನ್ನು ಸಭಾಧ್ಯಕ್ಷರು ನಿರಾಕರಿಸಿದರು.
11 ಗಂಟೆಗೆ ಕಲಾಪ ಆರಂಭವಾಗುತ್ತದೆ ಎಂದು ಭಾವಿಸಿದ್ದೆವು. ಹತ್ತು ಗಂಟೆಗೆ ಎಂಬುದು ಗೊತ್ತಿರಲಿಲ್ಲ ಎಂದು ಶಿವಲಿಂಗೇಗೌಡರು ಹೇಳಿದರು.ಇಂತಹ ಬೇಜವಾಬ್ದಾರಿಯ ಸರ್ಕಾರವನ್ನು ನಾವು ಇದುವರೆಗೆ ನೋಡಿಲ್ಲ ಎಂದು ಬಿಜೆಪಿ ಸದಸ್ಯರು ಹೇಳಿದರು.