ಬೆಂಗಳೂರು: ‘ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಮತ್ತು ಬಿಜೆಪಿ ನಾಯಕರ ಜೊತೆಗೆ ನಡೆದಿದೆ ಎನ್ನಲಾದ ಸಂಭಾಷಣೆಗಳ ಆಡಿಯೊ ಮತ್ತು ವಿಡಿಯೊ ದಾಖಲೆಗಳು ಈ ಹಿಂದೆಯೇ ಮಾಧ್ಯಮಗಳಲ್ಲಿ ಬಿಡುಗಡೆಯಾಗಿತ್ತು. ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳನ್ನು ಆಧರಿಸಿ ಈ ಮಾತು ಆಡುತ್ತಿದ್ದೇನೆ’ ಎಂದು ಸಚಿವ ಕೃಷ್ಣಬೈರೇಗೌಡ ವಿಧಾನಸೌಧದಲ್ಲಿ ಹೇಳಿದರು.
‘ರಮೇಶ್ ಜಾರಕಿಹೊಳಿ ಏಳೆಂಟು ತಿಂಗಳಿಂದ ಬಿಜೆಪಿ ಸಂಪರ್ಕದಲ್ಲಿದ್ದಾರೆ.ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಅವರು ಕೆಲವು ನಾಯಕರೊಂದಿಗೆ ನಡೆಸಿದ ಫೋನ್ ಸಂಭಾಷಣೆಗಳು ಈ ಹಿಂದೆ ಬಹಿರಂಗಗೊಂಡಿದ್ದವು. ತಮಗೆ ₹25 ಕೋಟಿ ನೀಡುವ ಆಫರ್ ಇದೆ ಎಂದಿದ್ದರು.ಆದರೆ ಅವರಿಗೆ ಫೋನ್ ಕರೆ ಮಾಡಿದ್ದು ಯಾರು ಎಂದು ಹೆಸರು ಹೇಳಲಿಲ್ಲ’ ಎಂದು ಕೃಷ್ಣಬೈರೇಗೌಡ ಹೇಳಿದರು.
ಕೃಷ್ಣಬೈರೇಗೌಡರ ಮಾತಿಗೆಜಗದೀಶ್ ಶೆಟ್ಟರ್ ಆಕ್ಷೇಪ ವ್ಯಕ್ತಪಡಿಸಿದರು.ಆರೋಪಕ್ಕೆ ಸಂಬಂಧಿಸಿದಂತೆನನ್ನಲ್ಲಿರುವ ದಾಖಲೆಗಳನ್ನು ಸಂಜೆ ನಿಮಗೆ ನೀಡುವೆ ಸಭಾಧ್ಯಕ್ಷರಿಗೆ ಕೃಷ್ಣಬೈರೇಗೌಡರು ಭರವಸೆ ನೀಡಿದರು.
‘ಬಿಜೆಪಿಯವರೇ ಮುಂದೆ ನಿಂತು ರಾಜೀನಾಮೆ ಕೊಡಿಸಿದ್ದಾರೆ’ ಎನ್ನುವ ಮಾತಿಗೂ ಕೃಷ್ಣಬೈರೇಗೌಡರು ಸಾಕ್ಷಿ ನೀಡಬೇಕಾಗುತ್ತೆ ಎಂದು ಶಾಸಕ ಮಾಧುಸ್ವಾಮಿ ಒತ್ತಾಯಿಸಿದರು.
‘ಶಾಸಕರನ್ನು ಸೆಳೆಯುವ ಪ್ರಯತ್ನದಲ್ಲಿ ‘ನಿಮ್ಮ ಮೇಲಿರುವ ಕೇಸ್ಗಳ ವಿಚಾರ ನಾನು ತಗೊಳ್ತೀನಿ. ಮಂತ್ರಿ ಮಾಡ್ತೀನಿ’ ಅಂತೆಲ್ಲಾ ಬಿಜೆಪಿ ಆಮಿಷ ಒಡ್ಡಿದೆ’ ಎಂದು ಕೃಷ್ಣಬೈರೇಗೌಡ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.