ಮಡಿಕೇರಿ: ಚೆನ್ನೈ ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ವಿಚಿತ್ರ ವೇಷದಲ್ಲಿ ಕಾಣಿಸಿಕೊಂಡಿದ್ದ ನಟ, ನಿರ್ದೇಶಕ ‘ಹುಚ್ಚಾ’ ವೆಂಕಟ್ ಗುರುವಾರ ಸಂಜೆ ಮಡಿಕೇರಿಯಲ್ಲಿ ಪ್ರತ್ಯಕ್ಷವಾಗಿದ್ದ.
ಮಂಜಿನ ನಗರಿಗೆ ಬಂದಿದ್ದಆತ, ಸುಮ್ಮನೇ ಹೋಗದೆ ಮುಖ್ಯರಸ್ತೆಯಲ್ಲಿ ‘ಹುಚ್ಚಾಟ’ ಮಾಡಲು ಹೋಗಿ ಗೂಸಾ ತಿಂದಿದ್ದಾನೆ. ನಗರದ ಕೆಎಸ್ಆರ್ಟಿಸಿ ಡಿಪೋ ಎದುರು ನಿಂತಿದ್ದ ಮಾರುತಿ 800 ಕಾರಿನ ಮೇಲೆ ಕಲ್ಲು ತೂರಾಟ ಗಾಜು ಪುಡಿಗೈದು ಕೊನೆಗೆ ಪೊಲೀಸರ ಅತಿಥಿಯಾಗಿದ್ದಾನೆ.
ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರಗಳನ್ನೂ ಅಡ್ಡಗಟ್ಟಿ ಅವುಗಳನ್ನು ಹಾನಿಗೊಳಿಸಲು ಮುಂದಾಗಿದ್ದ. ಎಷ್ಟು ಬುದ್ಧಿ ಹೇಳಿದರೂ ತನ್ನ ‘ಕಿರಿಕ್’ ನಿಲ್ಲಿಸಲಿಲ್ಲ. ಮೊದಲು ಒಂದಿಬ್ಬರು ಥಳಿಸಿದರು. ಮತ್ತೆ ಅದೇ ವರ್ತನೆ ಮುಂದುವರೆದಿತ್ತು.
ಯುವಕನ ಮೇಲೂ ಹಲ್ಲೆ:ನಾಪೋಕ್ಲು ನಿವಾಸಿ ದಿಲೀಪ್ ಅವರು ಕಾರು ನಿಲ್ಲಿಸಿ ಎಟಿಎಂಗೆ ಹೋಗಿ ವಾಪಸ್ ಬರುವಾಗ ಆತನಿಗೂ ಕಪಾಳಮೋಕ್ಷ ಮಾಡಿಬಿಟ್ಟ. ‘ನಾನು ಹುಚ್ಚಾ ವೆಂಕಟ್ ಹೆಸರಷ್ಟೇ ಅಂದುಕೊಂಡಿದ್ದೆ. ನಿಜವಾಗಲೂ ಆತ ಹುಚ್ಚನೇ ಆಗಿದ್ದಾನೆ. ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದಾನೆ’ ಎಂದು ದಿಲೀಪ್ ಪ್ರತಿಕ್ರಿಯಿಸಿದರು.
ಶೂಟಿಂಗ್ ಅಂದುಕೊಂಡಿದ್ದರು:ಈ ಸನ್ನಿವೇಶ ಕಂಡ ಸಾರ್ವಜನಿಕರು, ಯಾವುದೋ ಸಿನಿಮಾ ಶೂಟಿಂಗ್ ಇರಬೇಕೆಂದು ಮೊಬೈಲ್ನಲ್ಲಿ ದೃಶ್ಯ ಸೆರೆ ಹಿಡಿಯಲು ಮುಂದಾಗಿದ್ದರು. ಆದರೆ, ನಡೆದಿದ್ದು ಮಾತ್ರ ನೈಜ ಘಟನೆ.
ಜಿತೇಶ್ ಅವರ ಕಾರಿನ ಮೇಲೂ ಕುಳಿತು, ‘ಹೇಳೋ… ನೀನೇನು ರೌಡಿನಾ.. ಯಾರನ್ನ ಬೇಕಾದರೂ ಕರೆಸು…’ ಎಂದೆಲ್ಲಾ ಕಿರಿಕ್ ಮಾಡಿಬಿಟ್ಟ ವೆಂಕಟ್. ಮತ್ತೆ ಕುಪಿತರಾದ ಜನರು ಸಿನಿಮಾ ಸ್ಟೈಲ್ನಲ್ಲೇ ‘ಪಂಚ್’ ನೀಡಿದರು. ಆ ಪಂಚ್ಗೆ ಹುಚ್ಚಾ ವೆಂಕಟ್ ರಂಪಾಟ ಸ್ವಲ್ಪ ತಣ್ಣಗಾಯಿತು. ಸ್ಥಳಕ್ಕೆ ಬಂದ ನಗರ ಪೊಲೀಸರು ಹುಚ್ಚಾ ವೆಂಕಟ್ನನ್ನು ಠಾಣೆಗೆ ಕರೆದೊಯ್ದರು.
ಕಾರಿನಲ್ಲಿ ನಗರಕ್ಕೆ ಬಂದಿದ್ದ ವೆಂಕಟ್, ಅದರೊಳಗೆ ಬಟ್ಟೆ, ಹೊದಿಕೆ, ಚಪ್ಪಲಿ ಇಟ್ಟುಕೊಂಡಿದ್ದ. ಜತೆಗೆ, ಯಾರೂ ಬಂದಿರಲಿಲ್ಲ. ಮದ್ಯ ಸೇವಿಸಿದವನಂತೆ ವರ್ತಿಸುತ್ತಿದ್ದ.
ಪದೇ ಪದೇ ಮಡಿಕೇರಿಗೆ ಬರುತ್ತಿದ್ದ ಹುಚ್ಚಾ ವೆಂಕಟ್ ನಾಲ್ಕು ತಿಂಗಳಿಂದ ಕಾಣೆಯಾಗಿದ್ದ. ಈಗ ದಿಢೀರ್ ಪ್ರತ್ಯಕ್ಷವಾಗಿ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಗೂಸಾ ತಿಂದು ಪೊಲೀಸ್ ಠಾಣೆಯಲ್ಲಿ ರಾತ್ರಿ ಕಳೆಯುವಂತಾಗಿದೆ.