ಬೆಂಗಳೂರು:‘ರಾಹುಲ್ ಗಾಂಧಿಬಗ್ಗೆ ವೈಯುಕ್ತಿಕ ಹೇಳಿಕೆ ಕೊಡುವುದು ಸರಿಯಲ್ಲ.ಟ್ಯೂಬ್ ಲೈಟ್ ಚೆನ್ನಾಗಿಯಾದ್ರೂ ಬೆಳಗುತ್ತೆ, ಮೋದಿಯವರು ಜಿರೋ ಲೈಟ್ ಇದ್ದಂತೆ. ಅಂದ್ರೆ ಲೈಟ್ ಇರುತ್ತೆ, ಬೆಳಕು ಮಾತ್ರ ಇರಲ್ಲ,ನಾನು ಸಂಸತ್ತಿನಲ್ಲಿ ಭಾಗವಹಿಸಿದ್ರೆ ಇದನ್ನೇ ಹೇಳ್ತಿದ್ದೆ’ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಕುಟುಕಿದರು.
‘ಮೋದಿಯವರು ಸಂಸತ್ತಿನಲ್ಲಿ ರೈತರ ಖಾತೆಗೆ ₹ 15 ಲಕ್ಷ ಹಾಕುವ ಭರವಸೆ ನೀಡಿದ್ದರು, ಮೊದಲು ಅದರ ಬಗ್ಗೆ ಮಾತನಾಡಲಿ’ ಎಂದು ಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ಕಲಬುರ್ಗಿವಿಮಾನನಿಲ್ದಾಣ ಬರಲು ನಾನು ಕಾರಣ, ಆದರೆ ಉದ್ಘಾಟನೆಗೆ ಆಹ್ವಾನ ನೀಡಲಿಲ್ಲ. ಬಿಜೆಪಿ ಸರ್ಕಾರದಲ್ಲಿ ನಿತಿನ್ ಗಡ್ಕರಿ ಒಬ್ಬರು ಎಲ್ಲರನ್ನೂ ಪರಿಗಣಿಸುತ್ತಾರೆ. ಆದರೆ ಅವರಿಗೆ ಸ್ವಾತಂತ್ರ್ಯಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಅವರು ಹೇಳಿದರು.
‘ಹೈದರಾಬಾದ್ಕರ್ನಾಟಕಕ್ಕೆ ‘ಕಲ್ಯಾಣ’ ಅಂತ ಮಾಡಿದ್ದಾರೆ. ನೋಡೋಣ ಅದೆಷ್ಟು ಕಲ್ಯಾಣ ಮಾಡ್ತಾರೆ ಅಂತ,ಹಣ ಬಿಡುಗಡೆಯನ್ನೇ ಮಾಡೋದಿಲ್ಲ,ಕೆಲವರು ಕೇಳುತ್ತಿದ್ದಂತೆ ಬಿಡುಗಡೆ ಮಾಡ್ತಾರೆ, ಕೆಲವು ಕ್ಷೇತ್ರಗಳಿಗೆ ಹಣವನ್ನೇ ಕೊಡುತ್ತಿಲ್ಲ. ಇಂತಹ ತಾರತಮ್ಯ ಮಾಡುತ್ತಿರುವಾಗ ಬಜೆಟ್ ಯಾಕೆ ಮಾಡ್ತೀರಾ?’ಎಂದು ಖರ್ಗೆ ಖಾರವಾಗಿಪ್ರಶ್ನಿಸಿದರು.
ನಿಮ್ಮದು ಹೈವೋಲ್ಟೇಜ್, ಕೊಡ್ರಪ್ಪಾ ಕೆಲಸ
‘ನಾವೇನೋ ಟ್ಯೂಬ್ಲೈಟ್,ನಿಮ್ಮದು ಹೈವೋಲ್ಟೇಜ್ ಅಲ್ವಾ,ಕೊಡ್ರಪ್ಪಾ ಯುವಕರಿಗೆ ಬಲ್ಬ್, ಎಲ್ಲರಿಗೂ ಉದ್ಯೋಗ, ಮಾಡ್ರಪ್ಪಾ ಮೊದಲು ಆ ಕೆಲಸ’ ಎಂದು ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.
‘ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಹೈಕಮಾಂಡ್ ಮೇಲಿರುವ ಭಯದಿಂದ ಬಿಜೆಪಿ ನಾಯಕರು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಶಾಲಾ ಮಕ್ಕಳಂತೆ ಮೌನವಾಗಿದ್ದಾರೆ’ ಎಂದುಅವರು ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘ನಮ್ಮ ಮೈತ್ರಿ ಸರ್ಕಾರ ಬಂದ ಮೊದಲ ದಿನವೇ ಯಡಿಯೂರಪ್ಪ ಅವರು ರೈತರ ಸಾಲಮನ್ನಾ ವಿಚಾರವಾಗಿ ಎಷ್ಟು ಜೋರಾಗಿ ಮಾತನಾಡಿದ್ದರು, ಈಗ ಅವರ ಜೋಶ್ ಎಲ್ಲಿ ಹೋಯಿತು? ಮಹದಾಯಿ ಅಧಿಸೂಚನೆ ಹೊರಡಿಸಲು ಇನ್ನು ಎಷ್ಟು ದಿನ ಬೇಕು?’ ಎಂದು ಪ್ರಶ್ನಿಸಿದರು.