ಮಡಿಕೇರಿ: ಮಲೆನಾಡು ಸೈಕಲ್ ಪ್ರವಾಸಕ್ಕೆ ಶನಿವಾರ ಮಂಜಿನ ನಗರಿಯಲ್ಲಿ ಚಾಲನೆ ದೊರೆಯಿತು. ಸಮೀಪದ ಕೂರ್ಗ್ ರೆಸಾರ್ಟ್ ಆವರಣದಲ್ಲಿ ಡಿವೈಎಸ್ಪಿ ದಿನೇಶ್ ಕುಮಾರ್ ಅವರು ಹಸಿರು ನಿಶಾನೆ ತೋರಿದರು. ಐ ಸೈಕಲ್ ಸಂಸ್ಥೆಯು ಈ ಸೈಕಲ್ ಪ್ರವಾಸ ಆಯೋಜಿಸಿದ್ದು, ಶನಿವಾರ ಬೆಳ್ಳಂಬೆಳಿಗ್ಗೆಯೇ ಸೈಕಲಿಸ್ಟ್ ಕಲರವ ಕೇಳಿಬಂತು.
ದಕ್ಷಿಣ ಭಾರತದ 50 ಸೈಕಲ್ ಸವಾರರು ಪಾಲ್ಗೊಂಡಿದ್ದು ವಿಶೇಷ. ಎಲ್ಲರೂ ಒಂದೇ ರೀತಿಯ ಡ್ರೆಸ್ತೊಟ್ಟು ತಮ್ಮ ಪ್ರವಾಸ ಆರಂಭಿಸಿದರು. ಮಲೆನಾಡಿನ ಪ್ರಕೃತಿಗೆ ಸೈಕಲಿಸ್ಟ್ ಗಳು ಮನಸೋತರು. ಭಾರತದ ನಂಬರ್ ಒನ್ ಸೈಕಲ್ ಸವಾರ ಕಿರಣ್ ಕುಮಾರ್ ಈ ಪ್ರವಾಸ ತಂಡದಲ್ಲಿದ್ದರು.
ಉತ್ಸಾಹಿ ಸವಾರರಿಗೆ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಮಂಜೇಶ್ ಹೇಳಿದರು.
ಏಳು ದಿನ ಈ ಸೈಕಲ್ ಪ್ರವಾಸ ನಡೆಯಲಿದೆ. ಸೈಕಲ್ ಸವಾರರು ಸವಾರು ಮಾಡುತ್ತಲೇ ಪ್ರಕೃತಿ ಕಣ್ತುಂಬಿಕೊಳ್ಳಲಿದ್ದಾರೆ. ಸುಮಾರು 500 ಕಿ.ಮೀ ಪ್ರವಾಸ ನಡೆಯಲಿದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರದ ಸೈಕಲ್ ಸವಾರರು ಇದ್ದರು.
ಪೌರಾಯುಕ್ತ ಎಂ.ಎಲ್. ರಮೇಶ್, ಗ್ರೀನ್ ಸಿಟಿ ಫೋರಂ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಪೂಳಕಂಡ ರಾಜೇಶ್, ಕವಿತಾ ಬೊಳ್ಳಪ್ಪ, ಅಂಬೆಕಲ್ ನವೀನ್ ಕುಶಾಲಪ್ಪ, ಪಿ.ಕೃಷ್ಣಮೂರ್ತಿ, ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಜರಿದ್ದರು.