ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಯಮ ಮೀರಿ ಕುಲಪತಿ ನೇಮಕ?

ಸಂಶಯಕ್ಕೆಡೆ ಮಾಡಿದ ರಾಜ್ಯಪಾಲರ ನಡೆ
Last Updated 3 ಜೂನ್ 2019, 20:45 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳೂರು ವಿಶ್ವವಿದ್ಯಾಲಯಕ್ಕೆ ನೂತನ ಕುಲಪತಿಯನ್ನಾಗಿ ಡಾ.ಪಿ.ಎಸ್‌.ಯಡಪಡಿತ್ತಾಯ ಅವರ ನೇಮಕವಾಗಿರುವ ಬೆನ್ನಲ್ಲೇ, ಉನ್ನತ ಶಿಕ್ಷಣ ವಲಯದಲ್ಲಿ ರಾಜ್ಯಪಾಲರ ನಡೆಸಂಶಯ ಹುಟ್ಟುಹಾಕಿದೆ.

ಕುಲಪತಿ ನೇಮಕಾತಿಗಾಗಿ ರಚಿಸಲಾಗಿದ್ದ ಶೋಧನಾ ಸಮಿತಿ ಸರ್ಕಾರಕ್ಕೆ ಮೂವರ ಹೆಸರನ್ನು ಸೂಚಿಸಿತ್ತು. ಅದರಲ್ಲಿ ಪ್ರೊ.ಬಿ.ನಾರಾಯಣ, ಪ್ರೊ.ಎಂ.ಬಿ.ರಾಜೇಗೌಡ ಮತ್ತು ಪ್ರೊ.ಪಿ.ಎಸ್.ಯಡಪಡಿತ್ತಾಯ ಅವರ ಹೆಸರಿತ್ತು. ಸರ್ಕಾರ ಈ ಪೈಕಿ ರಾಜೇಗೌಡರ ಹೆಸರನ್ನು ಶಿಫಾರಸು ಮಾಡಿತ್ತು.

ರಾಜ್ಯಪಾಲರು ಈ ಶಿಫಾರಸನ್ನು ತಿರಸ್ಕರಿಸಿ ಸರ್ಕಾರಕ್ಕೆ ವಾಪಸ್‌ ಕಳುಹಿಸಿದ್ದರು. ಸರ್ಕಾರ ಮತ್ತೊಮ್ಮೆ ರಾಜೇಗೌಡರ ಹೆಸರನ್ನೇ ಶಿಫಾರಸು ಮಾಡಿ ರಾಜಭವನಕ್ಕೆ ಕಳುಹಿಸಿತ್ತು. ಈ ಹಂತದಲ್ಲಿ ರಾಜ್ಯಪಾಲರು ಸರ್ಕಾರ ಸೂಚಿಸಿದ ಹೆಸರನ್ನೇ ಕುಲಪತಿ ಹುದ್ದೆಗೆ ಆಯ್ಕೆ ಮಾಡಬೇಕು. ರಾಜ್ಯಪಾಲರಿಗೆ ಈಗಲೂ ಈ ಶಿಫಾರಸಿನಲ್ಲಿ ನಂಬಿಕೆ ಇಲ್ಲ ಎಂದಾದರೆ ಪಟ್ಟಿಯಲ್ಲಿರುವ ಇತರ ಇಬ್ಬರ ಹೆಸರಲ್ಲಿ ಒಬ್ಬರ ಹೆಸರನ್ನು ಆಯ್ಕೆ ಮಾಡುವ ಅಧಿಕಾರ ಇಲ್ಲ, ಬದಲಿಗೆ ಶೋಧನಾ ಸಮಿತಿಯಿಂದ ಬೇರೆ ಮೂವರ ಹೆಸರು ಸೂಚಿಸುವಂತೆ ತಿಳಿಸುವ ಅಧಿಕಾರ ಇದೆ.

‘ಸರ್ಕಾರದಿಂದ ಎರಡನೇ ಬಾರಿಗೆ ರಾಜೇಗೌಡರ ಹೆಸರನ್ನೇ ಶಿಫಾರಸು ಮಾಡಿ ರಾಜಭವನಕ್ಕೆ ಕಳುಹಿಸಿರುವುದು ನಿಜ. ಅದು ಹೇಗೆ ಬದಲಾಯಿತು, ಏಕೆ ಬದಲಾಯಿತು ಎಂಬುದು ಗೊತ್ತಿಲ್ಲ’ ಎಂದು ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾನೂನು ಪ್ರಕಾರವೇ ನೇಮಕ: ‘ಈ ಹಿಂದೆ ಮೈಸೂರು ವಿಶ್ವವಿದ್ಯಾಲಯದ ನೇಮಕಾತಿ ವಿಚಾರದಲ್ಲಿ ಆಗಿರುವ ಪ್ರಸಂಗವನ್ನು ಆಧರಿಸಿ ಈಗ ವಿವಾದ ಎದ್ದಿರಬಹುದು. ಆಗ ಶಿಫಾರಸು ಮಾಡಿದ್ದ ಮೂರೂ ಹೆಸರುಗಳಿಗೆ ಕಳಂಕ ಇತ್ತು. ಆದರೆ ಇದೀಗ ಅಂತಹ ಸಮಸ್ಯೆ ಇಲ್ಲ. ರಾಜೇಗೌಡರ ನೇಮಕಾತಿಗೆ ವಯಸ್ಸಿನ ಅಡ್ಡಿ ಇತ್ತು. ಉಳಿದ ಇಬ್ಬರಲ್ಲಿ ನಾನು ಹಿರಿಯ ಮತ್ತು ಅನುಭವಿ ಎಂಬ ಕಾರಣಕ್ಕೆ ನನ್ನ ನೇಮಕಾತಿ ಆಗಿರಬಹುದು. ನನ್ನ ವಿರುದ್ಧ ಯಾವುದೇ ಕಪ್ಪು ಚುಕ್ಕಿ ಇಲ್ಲವಲ್ಲ?’ ಎಂದು ಡಾ.ಪಿ.ಎಸ್‌.ಯಡಪಡಿತ್ತಾಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT