ಬೆಳಗಾವಿ: ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಮಹಾ ವಿಕಾಸ ಅಘಾಡಿ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಇಲ್ಲಿನ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡರು ಹಾಗೂ ಕಾರ್ಯಕರ್ತರು ಧರ್ಮವೀರ ಸಂಭಾಜಿ ವೃತ್ತದಲ್ಲಿ ಗುರುವಾರ ಸಂಜೆ ಸಂಭ್ರಮ ಆಚರಿಸಿದರು. ಈ ವೇಳೆ, ಗಡಿ ವಿವಾದವನ್ನು ಕೆದಕುವ ಘೋಷಣೆಗಳನ್ನು ಕೂಗಿದರು.
ಸಮಿತಿಯ ಮುಖಂಡರಾದ ದೀಪಕ್ ದಳವಿ ಹಾಗೂ ಮನೋಹರ ಕಿಣೇಕರ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಕಾರ್ಯಕರ್ತರು ನೆರೆದಿದ್ದವರಿಗೆ ಸಿಹಿ ಹಂಚಿದರು. ಅವರು ರಸ್ತೆಯ ಮಧ್ಯದಲ್ಲೇ ಪಟಾಕಿಗಳನ್ನು ಸಿಡಿಸಿದ್ದರಿಂದ, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು.
‘ಬೆಳಗಾಂವ್, ಕಾರವಾರ, ನಿಪ್ಪಾಣಿ, ಬೀದರ್, ಭಾಲ್ಕಿ ಕೂಡ ಸಂಯುಕ್ತ ಮಹಾರಾಷ್ಟ್ರದ ಭಾಗವಾಗಲೇಬೇಕು’ ಎಂದು ಘೋಷಣೆಗಳನ್ನು ಕೂಗಿದರು.