ತುಮಕೂರು: ಶಾಸಕ ಸಿ.ಟಿ.ರವಿ ಪ್ರಯಾಣಿಸುತ್ತಿದ್ದ ಕಾರು, ಹೆದ್ದಾರಿಯಲ್ಲಿ ನಿಂತಿದ್ದ ಕಾರುಗಳಿಗೆ ಡಿಕ್ಕಿಯಾಗಿ ಇಬ್ಬರು ಯುವಕರು ಸಾವಿಗೀಡಾದ ಪ್ರಕರಣದ ಸಂಬಂಧ ಸಲ್ಲಿಕೆಯಾಗಿರುವ ದೂರಿನಲ್ಲಿ ಸಿ.ಟಿ.ರವಿ ಅವರ ಹೆಸರಿನ ಉಲ್ಲೇಖವಿಲ್ಲ.
ಅಪಘಾತದ ಸಂಬಂಧ ಮೃತರ ಸ್ನೇಹಿತ ಪುನೀತ್ ಎಂಬುವವರು ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನಲ್ಲಿ ಸಿ.ಟಿ.ರವಿ ಅವರ ಹೆಸರು ಪ್ರಸ್ತಾಪಿಸಿಲ್ಲ. ಹಾಸನ ಮಾರ್ಗವಾಗಿ ಬಂದ ಕಾರು ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ನಮ್ಮ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ ಎಂದು ದೂರಿನಲ್ಲಿ ಹೇಳಿದ್ದಾರೆ.
ದೂರಿನಲ್ಲಿ ಹೀಗಿದೆ...
‘ಫೆ.15ರಂದು 13 ಜನ ಸ್ನೇಹಿತರೊಂದಿಗೆ ಶೃಂಗೇರಿ, ಹೊರನಾಡು, ಕುಂದಾಪುರ ಪ್ರವಾಸಕ್ಕೆ ತೆರಳಿದ್ದೆವು. ಪ್ರವಾಸ ಮುಗಿದ ನಂತರ ಕುಂದಾಪುರದಿಂದ ಫೆ.18ರಂದು ಸಂಜೆ ಸುಮಾರು 4:30ಕ್ಕೆ ಗ್ರಾಮಗಳ ಕಡೆಗೆ ವಾಪಸ್ ಹೊರಟೆವು. ಹಾಸನ–ಬೆಂಗಳೂರು ಹೆದ್ದಾರಿ ಎನ್ಎಚ್ 75ರಲ್ಲಿ ಕುಣಿಗಲ್ ಸಮೀಪದ ಬ್ರಿಡ್ಜ್ ಹತ್ತಿರ ಬೆಳಗಿನ ಜಾವ 1:45ಕ್ಕೆ ಸ್ವಿಫ್ಟ್ ಡಿಸೈರ್ ಕಾರು ಹಾಗೂ ಸ್ಕಾರ್ಪಿಯೊ ಕಾರುಗಳನ್ನು ರಸ್ತೆಯ ಎಡ ಭಾಗದಲ್ಲಿ ನಿಲ್ಲಿಸಿದೆವು. ಇಂಡಿಕೇಟರ್ಗಳನ್ನು ಹಾಕಿದ್ದೆವು. ಲಗೇಜ್ಗಳನ್ನು ಒಂದು ಕಾರಿನಿಂದ ಮತ್ತೊಂದು ಕಾರಿಗೆ ವರ್ಗಾಯಿಸಿಕೊಳ್ಳುತ್ತಿದ್ದೆವು.
ಅದೇ ಸಮಯದಲ್ಲಿ ಹಾಸನ ಮಾರ್ಗದಲ್ಲಿ ಬಂದ ಕಾರು; ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಕ ಕಾರು ಚಾಲನೆ ಮಾಡಿಕೊಂಡು ಎಡ ಭಾಗದಲ್ಲಿ ನಿಂತಿದ್ದ ನಮ್ಮ ವಾಹನಗಳಿಗೆ ಡಿಕ್ಕಿ ಹೊಡೆಸಿರುತ್ತಾನೆ. ಆನಂತರ, ರಸ್ತೆ ಬದಿಯಲ್ಲಿ ನಿಂತಿದ್ದ ಸ್ನೇಹಿತರಾದ ಸುನೀಲ್ಗೌಡ, ಶಶಿಕುಮಾರ್, ಮುನಿರಾಜು, ಜೈಚಂದ್ರ ಹಾಗೂ ಮಂಜುನಾಥ್ಗೆ ಡಿಕ್ಕಿ ಹೊಡೆಸಿರುತ್ತಾರೆ. ಡಿಕ್ಕಿ ಪರಿಣಾಮ, ಸುನೀಲ್ಗೌಡ ಮತ್ತು ಶಶಿಕುಮಾರ್ ತೀವ್ರ ಗಾಯಗೊಂಡು ರಕ್ತಸ್ರಾವದಿಂದ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಉಳಿದ ಮೂವರಿಗೆ ತೀವ್ರ ಪೆಟ್ಟು ಬಿದ್ದಿರುತ್ತದೆ.... ಅಪಘಾತ ಮಾಡಿದ ಫಾರ್ಚುನರ್ ಕಾರಿನ ಸಂಖ್ಯೆ– KA-18 Z- 7299,...'
ಪುನೀತ್ ದೂರಿನಲ್ಲಿ ದುರ್ಘಟನೆಯನ್ನು ವಿವರಿಸಿದ್ದು, ಚಾಲಕನ ಮೇಲೆ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಕೋರಿದ್ದಾರೆ. ದೂರಿನಲ್ಲಿ ಒಂದು ಕಡೆಯೂ ಶಾಸಕ ಸಿ.ಟಿ.ರವಿ ಇದ್ದುದರ ಪ್ರಸ್ತಾಪ ಮಾಡಿಲ್ಲ. ಆದರೆ, ವಿಡಿಯೊದಲ್ಲಿ ಸಿ.ಟಿ.ರವಿ ಅವರನ್ನು ಪ್ರಶ್ನಿಸುತ್ತಿರುವುದು, ಸಹಾಯಕ್ಕಾಗಿ ಕೋರುತ್ತಿರುವುದು ಹಾಗೂ ಸಂಕಟ ವ್ಯಕ್ತಪಡಿಸುತ್ತಿರುವುದನ್ನು ಕಾಣಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.