ಮಂಡ್ಯ: ಕೆ.ಆರ್.ಪೇಟೆ ವಿಧಾನಸಭಾ ಉಪ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದ ವ್ಯಕ್ತಿಯೊಬ್ಬರನ್ನು ಸರ್ಕಾರಿ ಶಾಲಾ ಶಿಕ್ಷಕ ಎಂದು ತಪ್ಪಾಗಿ ಗ್ರಹಿಸಿ ಅವರಿಗೆ ಚುನಾವಣಾಧಿಕಾರಿ ಷೋಕಾಸ್ ನೋಟಿಸ್ ನೀಡಿದ್ದಾರೆ.
ತೆಂಡೇಕೆರೆ ಸರ್ಕಾರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ದಾನಸುಂದರ ಅವರು ಚುನಾವಣಾಧಿಕಾರಿಗಳ ನೋಟಿಸ್ನಿಂದ ಭಯ ಬಿದ್ದಿದ್ದಾರೆ. ದಾನಸುಂದರ ಅವರಂತೆಯೇ ಇರುವ ಜೆಡಿಎಸ್ ಕಾರ್ಯಕರ್ತ ತಿಮ್ಮೇಗೌಡ ಶಾಸಕ ಎಚ್.ಡಿ.ರೇವಣ್ಣ ಅವರ ಹಿಂದೆ ನಿಂತು ಪ್ರಚಾರ ನಡೆಸಿದ್ದಾರೆ. ಈ ಕುರಿತ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದ್ದವು. ಅನಾಮಧೇಯ ವ್ಯಕ್ತಿಯೊಬ್ಬರು ಶಿಕ್ಷಕ ದಾನಸುಂದರ ಅವರೇ ಪ್ರಚಾರ ಮಾಡುತ್ತಿದ್ದಾರೆ ಎಂದು ಚುನಾವಣಾಧಿಕಾರಿಗೆ ಕರೆ ಮಾಡಿ ತಿಳಿಸಿದ್ದರು.
ಮಾಹಿತಿ ಪರಿಶೀಲನೆ ನಡೆಸದ ಚುನಾವಣಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ತಪ್ಪು ಗ್ರಹಿಕೆಯಿಂದ ದಾನಸುಂದರ ಅವರಿಗೆ ನೋಟಿಸ್ ಕೊಟ್ಟಿದ್ದಾರೆ. ನಂತರ ದಾನಸುಂದರ ಕ್ಷೇತ್ರ ಶಿಕ್ಷಣಾಧಿಕಾರಿಯನ್ನು ಭೇಟಿ ಮಾಡಿ ಪ್ರಚಾರ ಮಾಡಿರುವ ವ್ಯಕ್ತಿ ತಾನಲ್ಲ ಎಂದು ವಿವರಣೆ ನೀಡಿದ್ದಾರೆ.
‘ಮಾಧ್ಯಮ ನಿಗಾ ವಿಭಾಗ ನೀಡಿದ ಮಾಹಿತಿ ಆಧರಿಸಿ ನೋಟಿಸ್ ನೀಡಿರಬಹುದು. ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಅವರು ಪ್ರಚಾರದಲ್ಲಿ ಭಾಗಿಯಾಗದಿದ್ದರೆ ಅವರಿಗೆ ವಿವರಣೆ ನೀಡಲಾಗುವುದು’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.