ನವದೆಹಲಿ: 15 ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯಲ್ಲಿ 12 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸಿದ ರಾಜ್ಯದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಬುಧವಾರ ಗೌರವ ಸಲ್ಲಿಸಿದ್ದಾರೆ.
ಸಂಸತ್ನಲ್ಲಿ ಬೆಳಿಗ್ಗೆ ನಡೆದ ಬಿಜೆಪಿ ಸಂಸದರ ಸಾಪ್ತಾಹಿಕ ಸಭೆಯಲ್ಲಿ ಕರ್ನಾಟಕದ ಉಪ ಚುನಾವಣೆಯ ಗೆಲುವನ್ನು ಪ್ರಸ್ತಾಪಿಸಿದ ಮೋದಿ ಎದ್ದು ನಿಂತು ಗೌರವ ಸೂಚಿಸಿದರಲ್ಲದೆ, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಸಂಪುಟದ ಸದಸ್ಯರನ್ನು ಅಭಿನಂದಿಸಿದರು.
‘ಆರು ತಿಂಗಳ ಅಧಿಕಾರ ಅವಧಿ ಪೂರೈಸಿದ ಮೋದಿ ಅವರಿಗೆ ಎಲ್ಲ ಸಂಸದರೂ ಎದ್ದು ನಿಂತು ಗೌರವ ಸೂಚಿಸಿದೆವು. ನಂತರ ಪ್ರಧಾನಿಯವರೇ ಎದ್ದು ನಿಂತು ಕರ್ನಾಟಕದ ಜನರನ್ನು ಗೌರವಿಸಿದರು' ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗಾರರಿಗೆ ತಿಳಿಸಿದರು.
ವಿಶೇಷವಾಗಿ ಚಿಕ್ಕಬಳ್ಳಾಪುರ ಹಾಗೂ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರಗಳ ಮತದಾರರನ್ನು ಕೊಂಡಾಡಿದ ಪ್ರಧಾನಿ, ಆ ಎರಡೂ ಜಿಲ್ಲೆಗಳಲ್ಲಿ ಪಕ್ಷಕ್ಕೆ ದೊರೆಯದಿದ್ದ ಜಯ ಮೊದಲ ಬಾರಿಗೆ ದೊರೆತಿರುವುದು ಅಭಿನಂದನೀಯ ಎಂದು ಸ್ಮರಿಸಿದ್ದಾಗಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.