ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿನಿಮೀಯ ತಿರುವುಗಳ ‘ಕುಮಾರ ಪರ್ವ’

ಕಾರು ಚಾಲಕನಿಂದ ಸರ್ಕಾರದ ಸಾರಥಿವರೆಗೆ....
Last Updated 15 ಮೇ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿನ ಯಾವೊಂದು ಪಕ್ಷಕ್ಕೂ ಸಂಪೂರ್ಣ ಬಹುಮತ ಬಂದಿಲ್ಲ. 38 ಸ್ಥಾನಗಳನ್ನು ಗೆದ್ದಿರುವ ಜೆಡಿಎಸ್‌ನ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ ಹೆಸರು ಮುಖ್ಯಮಂತ್ರಿಯ ರೇಸ್‌ನಲ್ಲಿ ಮುನ್ನೆಲೆಗೆ ಬಂದಿದೆ.

ತಂದೆ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿಯಾದಾಗಲೂ ರಾಜಕೀಯ ಚಟುವಟಿಕೆಗಳಿಂದ ದೂರವೇ ಉಳಿದಿದ್ದ ಕುಮಾರಸ್ವಾಮಿ ಮೊದಲ ಬಾರಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ್ದು ಹಾಗೂ ಎರಡನೇ ಬಾರಿ ಅವರಿಗೆ ಈ ಅವಕಾಶ ಒದಗಿ ಬಂದಿದ್ದು ಎಲ್ಲವೂ ‘ಸಿನಿಮೀಯ’.

ತಂದೆ ರಾಜಕೀಯ ದಿಗ್ಗಜರಾಗಿದ್ದರೂ ಕುಮಾರಸ್ವಾಮಿ ಅವರಿಗೆ ಈ ಕ್ಷೇತ್ರದ ಬಗ್ಗೆ ಮೊದಲಿನಿಂದಲೂ ಅಷ್ಟೇನೂ ಒಲವು ಇರಲಿಲ್ಲ. ಕಾರುಗಳ ಬಗ್ಗೆ ವ್ಯಾಮೋಹ ಹೊಂದಿದ್ದ ಅವರು, ತಂದೆಯ ಕಾರಿನ ಚಾಲಕನಾಗಿ ಅವರ ಜೊತೆ ಊರು ಸುತ್ತುವುದನ್ನು ಇಷ್ಟಪಡುತ್ತಿದ್ದವರು. ಅಣ್ಣ ಎಚ್‌.ಡಿ.ರೇವಣ್ಣ ರಾಜಕೀಯವಾಗಿ ಸಕ್ರಿಯರಾಗಿದ್ದಾಗಲೂ ಅವರು ಈ ಕ್ಷೇತ್ರದಿಂದ ದೂರವೇ ಇದ್ದರು.

ಸಿನಿಮಾ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದ ಕುಮಾರಸ್ವಾಮಿ ಚಿತ್ರ ನಿರ್ಮಾಣದಲ್ಲಿ ತೊಡಗಿದ್ದರು. ‘ಚೆನ್ನಾಂಬಿಕಾ ಫಿಲ್ಸ್ಮ್’ ಹೆಸರಿನಲ್ಲಿ ಸ್ವಂತ ಚಿತ್ರ ನಿರ್ಮಾಣ ಘಟಕವನ್ನೂ ಅವರು ನಡೆಸುತ್ತಿದ್ದಾರೆ. ಸಿನಿಮಾ ವಿತರಣಾ ಕಾರ್ಯದಲ್ಲೂ ತೊಡಗಿಕೊಂಡಿದ್ದ ಅವರು ರಾಜಕೀಯ ಪ್ರವೇಶಿಸಿದ್ದು ಆಕಸ್ಮಿಕ ಎನ್ನುತ್ತಾರೆ ಪಕ್ಷದಲ್ಲಿನ ಅವರ ಒಡನಾಡಿಗಳು.

ಕನಕಪುರ ಕ್ಷೇತ್ರದಿಂದ 1996ರಲ್ಲಿ ಸಂಸದರಾಗಿ ಆಯ್ಕೆಯಾಗುವ ಮೂಲಕ ಅವರು ಮೊದಲ ಬಾರಿ ರಾಜಕೀಯ ಅಖಾಡ ಪ್ರವೇಶಿಸಿದರು. 1998ರ ಲೋಕಸಭಾ ಚುನಾವಣೆಯಲ್ಲಿ ಕನಕಪುರ ಕ್ಷೇತ್ರದಿಂದ ಸ್ಪರ್ಧಿಸಿ ಮೂರನೇ ಸ್ಥಾನ ಪಡೆದಿದ್ದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌ ಅವರ ಎದುರು ಸೋಲು ಕಂಡಿದ್ದರು. ಈ ಎರಡು ಸೋಲುಗಳು ಅವರನ್ನು ರಾಜಕೀಯವಾಗಿ ಮತ್ತಷ್ಟು ಪಕ್ವಗೊಳಿಸಿದವು.

2004ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು. ಆ ವರ್ಷ ಕಾಂಗ್ರೆಸ್– ಜೆಡಿಎಸ್ ಮೈತ್ರಿಕೂಟದ ಸರ್ಕಾರ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಅವರು ಪಕ್ಷದ ಕಾರ್ಯಾಧ್ಯಕ್ಷರಾದರು.

2005ರ ಅಂತ್ಯದಲ್ಲಿ ರಾಜ್ಯ ರಾಜಕೀಯದಲ್ಲಿ ಮಹತ್ತರ ಬೆಳವಣಿಗೆಗಳು ನಡೆದವು. ಆಗ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ವಿರುದ್ಧ ಅಸಮಾಧಾನಗೊಂಡಿದ್ದ ಕುಮಾರಸ್ವಾಮಿ, ತಂದೆಯ ಇಚ್ಛೆಗೆ ವಿರುದ್ಧವಾಗಿ ಬಿಜೆಪಿ ಜೊತೆ ಸಖ್ಯ ಬೆಳೆಸಿದರು. 2006ರ ಜನವರಿಯಲ್ಲಿ ಕಾಂಗ್ರೆಸ್‌ನ ಧರ್ಮಸಿಂಗ್ ನೇತೃತ್ವದ ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲವನ್ನು ಜೆಡಿಎಸ್‌ ಹಿಂಪಡೆಯಿತು. ಆಗಿನ ರಾಜಕೀಯ ಪರಿಸ್ಥಿತಿಯಿಂದಾಗಿ ಮುಖ್ಯಮಂತ್ರಿಯಾಗುವ ಅವಕಾಶ ಅವರಿಗೆ ಅನಿರೀಕ್ಷಿತವಾಗಿ ಒದಗಿಬಂತು. ತಲಾ 20 ತಿಂಗಳು ಅಧಿಕಾರ ಹಂಚಿಕೊಳ್ಳುವ ಒಪ್ಪಂದದೊಂದಿಗೆ 2006ರ ಫೆಬ್ರುವರಿಯಲ್ಲಿ ಜೆಡಿಎಸ್‌– ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂತು. 2007ರ ನವೆಂಬರ್‌ನಲ್ಲಿ ಸಮ್ಮಿಶ್ರ ಸರ್ಕಾರ ಪತನವಾಯಿತು.

2008ರ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ರಾಮನಗರ ಕ್ಷೇತ್ರದಿಂದ ಗೆದ್ದು ಬಂದರು. 2013ರಲ್ಲಿ ಇಲ್ಲಿಂದ ಮರು ಆಯ್ಕೆಯಾದರು. 2014ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್‌ನ ಎಂ.ವೀರಪ್ಪ ಮೊಯಿಲಿ ಅವರ ವಿರುದ್ಧ ಸೋತರು.

ಈ ಸಲದ ಚುನಾವಣೆಯಲ್ಲಿ ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳೆರಡರಲ್ಲೂ ಕಣಕ್ಕಿಳಿದಿದ್ದರು. ಪಕ್ಷದ ಅಭ್ಯರ್ಥಿಗಳನ್ನು ಗೆಲುವಿನ ದಡ ಮುಟ್ಟಿಸುವ ಸಲುವಾಗಿ ರಾಜ್ಯದಾದ್ಯಂತ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅವರು, ತಾವು ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇ ಕಡಿಮೆ. ಆದರೂ ಈ ಎರಡೂ ಕ್ಷೇತ್ರಗಳ ಜನ ಅವರನ್ನು ಗೆಲ್ಲಿಸಿದ್ದಾರೆ. ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ ಅವರ ಗೆಲುವಿನ ಓಟಕ್ಕೆ ಲಗಾಮು ಹಾಕುವ ಮೂಲಕ ಕುಮಾರಸ್ವಾಮಿ ರಾಜಕೀಯ ನೈಪುಣ್ಯ ತೋರಿಸಿದ್ದಾರೆ.

ಚುನಾವಣಾ ಪ್ರಚಾರದುದ್ದಕ್ಕೂ ‘ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಒಂದೊಂದು ಅವಕಾಶ ಕಲ್ಪಿಸಿದ್ದೀರಿ. ನನಗೂ ಒಂದು ಅವಕಾಶ ನೀಡಿ’ ಎಂದು ರಾಜ್ಯದ ಜನರನ್ನು ಕೋರಿದ್ದರು. ಪ್ರಚಾರದ ಅವಧಿಯಲ್ಲಿ ‘ಅವರಪ್ಪನಾಣೆಗೂ ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದಿಲ್ಲ’ ಎನ್ನುತ್ತಲೇ ಬಂದಿದ್ದ ಸಿದ್ದರಾಮಯ್ಯ ಈಗ ಅವರಿಗೇ ಬೆಂಬಲ ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT