ವಾಡಿ: ಹುಡುಗಿಯ ಪ್ರೀತಿಗಾಗಿ ಇಬ್ಬರು ಯುವಕರ ಮಧ್ಯೆಸಂಕನೂರು ಗ್ರಾಮದ ಹೊರವಲಯದಲ್ಲಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಅತನೂರು ಗ್ರಾಮದ ಶಿವಕುಮಾರ (26) ಕೊಲೆಯಾದ ಯುವಕ. ಕಲ್ಲುಬಂಡೆಗಳ ಕೆಳಗಡೆಯಿಂದ ಶವದ ವಾಸನೆ ಬಂದುದರಿಂದ ಗ್ರಾಮಸ್ಥರು ಸ್ಥಳೀಯ ಠಾಣೆಗೆ ಮಂಗಳವಾರ ಮಾಹಿತಿ ನೀಡಿದ್ದರು.
ಪ್ರಕರಣದ ವಿವರ: ಅಫಜಲಪುರ ತಾಲ್ಲೂಕಿನ ಅತನೂರು ಗ್ರಾಮದ ನಿವಾಸಿ ಶಿವಕುಮಾರ ಅವರ ಮದುವೆ ಅದೇ ಗ್ರಾಮದ ಯುವತಿ ಜೊತೆ ಜೂನ್ 15ರಂದು ನಿಶ್ಚಯವಾಗಿತ್ತು. ಆದರೆ ಮದುವೆಯಾಗುವ ಹುಡುಗಿಯ ವಿಷಯಕ್ಕೆ ಸಂಬಂಧಿಸಿದಂತೆ ಶಿವಕುಮಾರ ಹಾಗೂ ಅವನ ಸ್ನೇಹಿತ ಬೋಸಗಿ ಗ್ರಾಮದ ಮಲ್ಲಿಕಾರ್ಜುನ ಮಧ್ಯೆ ಜಗಳ ನಡೆದಿದೆ.
ಮಲ್ಲಿಕಾರ್ಜುನ ಉಪಾಯ ಮಾಡಿ ತನ್ನ ಸ್ನೇಹಿತನನ್ನು ಸಂಕನೂರು ಸಮೀಪದ ಗುಡ್ಡಕ್ಕೆ ಕರೆತಂದು ಕೊಲೆ ಮಾಡಿದ್ದಾನೆ. ಗುರುತು ಸಿಗಬಾರದೆಂದು ಕಲ್ಲುಬಂಡೆ ಹಾಕಿ ದೇಹವನ್ನು ವಿರೂಪಗೊಳಿಸಿದ್ದಾನೆ. ಪೊಲೀಸ್ ತನಿಖೆಯಲ್ಲಿ ಆರೋಪಿ ಮಲ್ಲಿಕಾರ್ಜುನ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಅಫಜಲಪುರ ತಾಲ್ಲೂಕಿನ ರೇವೂರು ಪೊಲೀಸ್ ಠಾಣೆಯಲ್ಲಿ ಜೂನ್ 10ರಂದು ಅಪಹರಣ ಪ್ರಕರಣ ದಾಖಲಾಗಿತ್ತು. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣವನ್ನು ಚಿತ್ತಾಪುರ ಸಿಪಿಐ ಪಂಚಾಕ್ಷರಿ ವಿ.ಸಾಲಿಮಠ ಹಾಗೂ ಸ್ಥಳೀಯ ಪಿಎಸ್ಐ ವಿಜಯಕುಮಾರ ಭಾವಗಿ ಒಂದೇ ದಿನದಲ್ಲಿ ಪತ್ತೆ ಹಚ್ಚಿದ್ದಾರೆ.