ಗದಗ: ಬಿಜೆಪಿ ಒಕ್ಕಲಿಗ ಸಮುದಾಯದ ವಿರೋಧಿ ಎಂಬ ಆರೋಪ ಸರಿಯಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ, ಜಾತಿ ಆಧಾರಿತ ಟಾರ್ಗೆಟ್ ಪ್ರಶ್ನೆ ಉದ್ಭವಿಸಲ್ಲ. ಡಿ.ಕೆ.ಶಿವಕುಮಾರ್ ನಿರ್ದೋಶಿಯಾಗಿ ಹೊರಬಂದರೆ ನನಗೂ ಸಂತೋಷ’ ಎಂದರು.
‘ಬಿಜೆಪಿಯಲ್ಲೂ ಒಕ್ಕಲಿಗ ನಾಯಕರು ಹಲವರು ಇದ್ದಾರೆ. ಹೀಗಿರುವಾಗ ಒಕ್ಕಲಿಗರ ವಿರೋಧಿ ಪಕ್ಷ ಎಂದು ಬಿಂಬಿಸುವುದು ಖಂಡನೀಯ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ, ಕಾನೂನು, ನ್ಯಾಯಾಲಯ ತನ್ನದೇ ಆದ ಕ್ರಮಕೈಗೊಳ್ಳುತ್ತದೆ’ ಎಂದರು.
‘ಈ ಹಿಂದೆ ಯಡಿಯೂರಪ್ಪ ಅವರನ್ನು ಬಂಧಿಸಿದ್ದಾಗ ಲಿಂಗಾಯತ ಟಾರ್ಗೆಟ್ ಎಂದು ನಾವು ಎಲ್ಲೂ ಬಿಂಬಿಸಲಿಲ್ಲ. ನಾವೇನು ಹೋರಾಟ ಮಾಡಲಿಲ್ಲ’ ಎಂದು ಕಾಂಗ್ರೆಸ್, ಜೆಡಿಎಸ್ ವಿರುದ್ಧ ಕಿಡಿ ಕಾರಿದರು.