ಧಾರವಾಡ: ಕೊಳಗೇರಿ ಮಕ್ಕಳ ಏಳಿಗೆಗೆ ಶ್ರಮಿಸಿ ‘ದಿಕ್ಕು’ ಎಂಬ ಸಂಸ್ಥೆ ಆರಂಭಿಸಿದ್ದ ನರ್ಮದಾ ಕುರ್ತಕೋಟಿ ಸೋಮವಾರ ನಿಧನರಾದರು.
ಅವರಿಗೆ 54 ವರ್ಷ ವಯಸ್ಸಾಗಿತ್ತು. ಮೂಲತಃ ಉತ್ತರ ಕನ್ನಡ ಜಿಲ್ಲೆಯವರಾದ ನರ್ಮದಾ, ಹಿರಿಯ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರ ಸೊಸೆ. ಕುರ್ತಕೋಟಿ ಅವರ ಮಗ ರಾಮ ಕುರ್ತಕೋಟಿ ಅವರನ್ನು ವಿವಾಹವಾಗಿದ್ದ ಇವರಿಗೆ ವರುಣ್ ಎಂಬ ಪುತ್ರ ಇದ್ದಾರೆ. ರಾಮ ಕುರ್ತಕೋಟಿ ಅವರು ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ.
2003ರಲ್ಲಿ ಕೀರ್ತಿನಾಥ ಕುರ್ತಕೋಟಿ ಅವರು ಮೃತಪಟ್ಟ ನಂತರ ಕುರ್ತಕೋಟಿ ಸ್ಮಾರಕ ಟ್ರಸ್ಟ್ ಆರಂಭಿಸಿದ್ದರು. ಕುರ್ತಕೋಟಿ ಅವರ ಪುಸ್ತಕಗಳನ್ನು ಮುದ್ರಿಸಿ ಮಾರುತ್ತಿದ್ದ ಈ ಸಂಸ್ಥೆ ಬಂದ ಹಣವನ್ನು ಕೊಳಗೇರಿ ಮಕ್ಕಳಿಗೆ ವಿನಿಯೋಗಿಸಿಲು ನಿರ್ಧರಿಸಿತು. ಇದಕ್ಕಾಗಿ ‘ದಿಕ್ಕು’ ಎಂಬ ಸಂಸ್ಥೆಯನ್ನು ಆರಂಭಿಸಿದರು.
ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲದ ಮಕ್ಕಳಿಗೆ ಶಾಲೆಗೆ ಹೋಗಲು ಬೇಕಾದ ಪರಿಕರಗಳನ್ನು ಒದಗಿಸುವುದು, ಶಿಬಿರಗಳನ್ನು ಆಯೋಜಿಸಿ ಮಕ್ಕಳಲ್ಲಿನ ಕೌಶಲ್ಯ ಬೆಳೆಸುವುದು, ಮಕ್ಕಳ ಪ್ರತಿಭೆ ಗುರುತಿಸಿ ವೇದಿಕೆ ಕಲ್ಪಿಸುವ ಕೆಲಸವನ್ನು ನರ್ಮದಾ ತಮ್ಮ ದಿಕ್ಕು ಸಂಸ್ಥೆ ವತಿಯಿಂದ ಮಾಡುತ್ತಿದ್ದರು.
ಕಳೆದ 22 ದಿನಗಳಿಂದ ಇಲ್ಲಿನ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಕೊನೆಯುಸಿರೆಳೆದರು. ಮೃತರ ಅಂತಿಮದರ್ಶನಕ್ಕೆ ಧಾರವಾಡದ ಶ್ರೀನಗರದ ಬಳಿ ಇರುವ ದೇಸಾಯಿ ಕಾಲೊನಿಯಲ್ಲಿರುವ ಕುರ್ತಕೋಟಿ ಅವರ ಮನೆಯಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.