ತುಮಕೂರು: ‘ರಾಜೀನಾಮೆ ನೀಡಿರುವ ಯಾವ ಶಾಸಕರೂ ವಾಪಸ್ ಬರುವುದಿಲ್ಲ. ಸರ್ಕಾರವೂ ಇರುವುದಿಲ್ಲ. ರಾಜೀನಾಮೆ ಕೊಟ್ಟಿರುವ ಶಾಸಕರಿಗೆ ಸಚಿವ ಎಚ್.ಡಿ.ರೇವಣ್ಣ ಅಷ್ಟೊಂದು ಹಿಂಸೆ ಕೊಟ್ಟಿದ್ದಾರೆ’ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ದೂರಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಧಿಕಾರ ಬೇಕು ಎನ್ನುವವರು ಸರ್ಕಾರ ಇರುತ್ತದೆ ಎನ್ನುತ್ತಿದ್ದಾರೆ. ವಾಸ್ತವವಾಗಿ ಈ ಸರ್ಕಾರ ಇಲ್ಲವೇ ಇಲ್ಲ’ ಎಂದರು.
ರೇವಣ್ಣ ಎಂಬುದು ಅವರ ಹೆಸರು ಮಾತ್ರ. ಅವರ ಕಾರ್ಯಕ್ರಮಗಳೆಲ್ಲ ರಾವಣನದ್ದೇ. ಅವರ ತಂದೆ ರಾವಣ ಎಂದು ಹೆಸರಿಡಬೇಕಿತ್ತು ಎಂದು ವ್ಯಂಗ್ಯವಾಡಿದರು.
‘ಬಿಜೆಪಿ ಮುಖಂಡ ಲಕ್ಷ್ಮಣ ಸವದಿ ಅವರು ನಾನು ಬಹಳ ವರ್ಷಗಳಿಂದ ಸ್ನೇಹಿತರು. ರಾಜಕೀಯ ಮೀರಿದ ಸ್ನೇಹ ನಮ್ಮದು. ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಳ್ಳಲು ಬಂದಿದ್ದರು. ಉಭಯ ಕುಶಲೋಪರಿಗೆ ನನ್ನ ಭೇಟಿ ಆಗಿದ್ದಾರೆ ಅಷ್ಟೇ. ಇದಕ್ಕೆ ರಾಜಕೀಯ ಲೇಪನ ಬೇಡ’ ಎಂದು ಅವರು ಸ್ಪಷ್ಟಪಡಿಸಿದರು.