ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಕರ ಮನವಿ ಸೇರ್ಪಡೆಗೆ ಆಗ್ರಹ

ಕೆಜಿಎಫ್‌ನಿಂದ ವಿವಿಧ ಪಕ್ಷಗಳ ವರಿಷ್ಠರಿಗೆ ಕೋರಿಕೆ
Last Updated 11 ಏಪ್ರಿಲ್ 2018, 9:50 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಪಕ್ಷಗಳು ಪ್ರಣಾಳಿಕೆಯಲ್ಲಿ ಕೃಷಿಕರ ಮನವಿಗಳನ್ನು ಸೇರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್‌, ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ಬಿ.ಎಲ್‌.ಶಂಕರ್‌, ವೀರಪ್ಪ ಮೊಯಿಲಿ ಅವರಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟದ (ಕೆಜಿಎಫ್‌) ಅಧ್ಯಕ್ಷ ಬಿ.ಎಸ್.ಜೈರಾಂ, ಪ್ರಧಾನ ಕಾರ್ಯದರ್ಶಿ ಯು.ಎಂ.ತೀರ್ಥಮಲ್ಲೇಶ್ ಮನವಿ ಮಾಡಿದ್ದಾರೆ.

ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ, ಕಾಫಿ ಬೆಳೆಗಾರರ ಸಾಲ ಮನ್ನಾ, ವನ್ಯಜೀವಿಗಳಿಂದ ಬೆಳೆ ಮತ್ತು ರೈತರ ಜೀವ ರಕ್ಷಣೆ, ಕಾಫಿ ಬೆಳೆಗಾರರಿಗೆ ವಿದ್ಯುತ್ ಉಚಿತ ಪೂರೈಕೆ, ಕೃಷಿ ಪತ್ತಿನ ಸಹಕಾರ ಸಂಸ್ಥೆಗಳಲ್ಲಿ ₹ 10 ಲಕ್ಷದವರೆಗೆ ಪಡೆದ ಬೆಳೆಸಾಲಕ್ಕೆ ಶೇ 3 ಬಡ್ಡಿ ದರ ನಿಗದಿ, ಕೃಷಿಕರಿಗೆ ಅಗತ್ಯವಾಗಿರುವ ಕಂದಾಯ ದಾಖಲಾತಿಗಳನ್ನು ಒಂದೇ ನಮೂನೆಯಲ್ಲಿ ನಮೂದಿಸುವ ವ್ಯವಸ್ಥೆ ಜಾರಿ, ಸಹಕಾರ ಸಂಸ್ಥೆ ಪುನಃಶ್ಚೇತನ ವಿಷಯಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಒತ್ತುವರಿ ಸಮಸ್ಯೆಗೆ ಶಾಶ್ವತ ಪರಿಹಾರ ನಿಟ್ಟಿನಲ್ಲಿ ಕೇರಳ, ತಮಿಳುನಾಡಿನಲ್ಲಿ ಸರ್ಕಾರಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಿರುವಂತೆ ಕರ್ನಾಟಕದಲ್ಲೂ ಗುತ್ತಿಗೆ ಆಧಾರದಲ್ಲಿ ನೀಡಬೇಕು. ಭೂಕಬಳಿಕೆ ಕಾಯ್ದೆಗೆ ತಿದ್ದುಪಡಿ ತರಬೇಕು. ರೈತರು 5 ಎಕರೆವರೆಗಿನ ಒತ್ತುವರಿ ಜಮೀನನ್ನು ಸಕ್ರಮಗೊಳಿಸಬೇಕು. 5 ಎಕರೆವರೆಗೆ ಎಕೆರೆಗೆ ವಾರ್ಷಿಕ ₹1ಸಾವಿರ, 5ರಿಂದ 10 ಎಕರೆವರೆಗೆ ಎಕರೆಗೆ ₹ 5ಸಾವಿರ, ಹಾಗೂ 10ರಿಂದ 25 ಎಕರೆವರೆಗೆ ಎಕರೆಗೆ ₹ 10ಸಾವಿರ ಗುತ್ತಿಗೆ ಶುಲ್ಕ ನಿಗದಿಗೊಳಿಸಬೇಕು.

25 ಎಕರೆಗಿಂತ ಹೆಚ್ಚಿನದಕ್ಕೆ ಎಕರೆಗೆ ₹ 15 ಸಾವಿರ ಗುತ್ತಿಗೆ ಶುಲ್ಕ ನಿಗದಿ ಗೊಳಿಸಬೇಕು. 90 ವರ್ಷ ಅವಧಿಗೆ ಕೃಷಿ ಜಮೀನನ್ನು ಗುತ್ತಿಗೆ ಆಧಾರದಲ್ಲಿ ನೀಡಬೇಕು.

ಕಾಫಿ ಮಂಡಳಿಯು 10 ಹೆಕ್ಟೇರ್‌ ವರೆಗಿನ ಬೆಳೆಗಾರರನ್ನು ಸಣ್ಣ ಬೆಳೆಗಾರರೆಂದು ಗುರುತಿಸಿದೆ. ಈ ಬೆಳೆಗಾರರಿಗೆ ಕಾಫಿಯ ಗುಣಮಟ್ಟ ಕಾಪಾಡಿಕೊಳ್ಳಲು ಕಣ, ಗೋದಾಮು, ಕೂಲಿಲೈನು, ಪಲ್ಪರ್ ಘಟಕ ಮೂಲಸೌಕರ್ಯಕ್ಕೆ ಸಹಾಯಧನ ಒದಗಿಸುತ್ತಿದೆ. ಮೂಲಸೌಕರ್ಯಕ್ಕಾಗಿ ಒತ್ತುವರಿಯಾಗಿರುವ ಎರಡು ಹೆಕ್ಟೇರ್‌ವರೆಗಿನ ಸರ್ಕಾರಿ ಜಾಗವನ್ನು ಸಕ್ರಮ ಮಾಡಿಕೊಡಬೇಕು.

ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಇದೆ. ಕಾಡುಪ್ರಾಣಿಗಳ ದಾಳಿಯಲ್ಲಿ ಆಸ್ತಿಪಾಸ್ತಿ, ಜೀವಹಾನಿಗಳು ಸಂಭವಿಸಿವೆ. ವನ್ಯಜೀವಿ ಮತ್ತು ಮಾನವ ಸಂಘರ್ಷವನ್ನು ಪರಿಹರಿಸಬೇಕು. ರೈಲ್ವೆ ಕಂಬಿಗಳ ತಡೆಗೋಡೆ ನಿರ್ಮಿಸಬೇಕು. ಕೃಷಿ ಪತ್ತಿನ ಸಹಕಾರ ಸಂಸ್ಥೆಗಳಲ್ಲಿ ₹10 ಲಕ್ಷದವರೆಗೆ ಪಡೆದ ಬೆಳೆಸಾಲಕ್ಕೆ ಶೇ 3 ಬಡ್ಡಿದರ ವಿಧಿಸಬೇಕು.

ಪಹಣಿ, ಇಸಿ, ಮ್ಯುಟೆಷನ್ ಮೊದಲಾದ ದಾಖಲೆಗಳೆಲ್ಲವೂ ಒಂದೇ ನಮೂನೆಯಲ್ಲಿ ನಮೂದಾಗುವ ವ್ಯವಸ್ಥೆ ಜಾರಿ ಮಾಡಬೇಕು. ಸಹಕಾರ ಸಂಸ್ಥೆಗಳಿಗೆ ಹಣ ಒದಗಿಸಿ, ಸಂಸ್ಥೆಗಳ ಆರ್ಥಿಕ ವಹಿವಾಟು ಸುಗಮವಾಗಿ ಸಾಗಲು, ಪುನಃಶ್ಚೇತನಕ್ಕೆ ನೆರವು ನೀಡಬೇಕು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT