ಬೆಂಗಳೂರು: ‘ಇಂದಲ್ಲ ನಾಳೆಯಾದರೂ ಜಿ. ಪರಮೇಶ್ವರ ಅವರು ಮುಖ್ಯಮಂತ್ರಿಯಾಗಬೇಕು’ ಎಂದು ಗೋವಿಂದರಾಜನಗರ ಕ್ಷೇತ್ರದ ಬಿಜೆಪಿ ಶಾಸಕ ವಿ. ಸೋಮಣ್ಣ ಹೇಳಿದರು.
ಕ್ಷೇತ್ರದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬೇರೆ ಸಚಿವರಿಗೆ ಹೋಲಿಸಿದರೆ ಪರಮೇಶ್ವರ ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. 2004ರಲ್ಲೇ ಅವರು ಮುಖ್ಯಮಂತ್ರಿಯಾಗಬೇಕಿತ್ತು. ಅವರಿಗೆ ಆ ಅರ್ಹತೆ ಇದೆ’ ಎಂದೂ ಹೇಳಿದರು.
‘ಶ್ರೀರಾಮುಲು ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದನ್ನೇ ಮಾಧ್ಯಮದವರು ದೊಡ್ಡ ವಿವಾದ ಮಾಡಿದ್ದರು. ಈ ವಿಷಯವನ್ನು ದೊಡ್ಡದಾಗಿಸಿ ಯಡಿಯೂರಪ್ಪ ಮತ್ತು ನನ್ನ ಮಧ್ಯೆ ಜಗಳ ತಂದು ಇಡಬೇಡಿ’ ಎಂದು ಅವರು ಹೇಳಿದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಗಾದಿ ಮೇಲೆ ಕಣ್ಣಿಟ್ಟಿದ್ದ ಹೊತ್ತಿನಲ್ಲಿ ಶ್ರೀರಾಮುಲು ಹೆಸರು ಪ್ರಸ್ತಾಪಿಸಿದ್ದು ಕಮಲ ಪಾಳಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು.