ಬೆಂಗಳೂರು: ಹಾಸನ ಜಿಲ್ಲೆಯ ಶಾಂತಿಗ್ರಾಮದ 40 ಎಕರೆ ಗೋಮಾಳದಲ್ಲಿ ಜೈಲು ನಿರ್ಮಾಣಕ್ಕೆ ಸಚಿವ ಸಂಪುಟ ಸಭೆಯಲ್ಲಿ ಗುರುವಾರ ಒಪ್ಪಿಗೆ ಸೂಚಿಸಲಾಯಿತು.
ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರು ಒತ್ತಡ ಹೇರಿ ಈ ಯೋಜನೆಯನ್ನು ಮಂಜೂರು ಮಾಡಿಸಿಕೊಂಡಿದ್ದಾರೆ. ಜತೆಗೆ, ₹657.8 ಕೋಟಿ ವೆಚ್ಚದ ಚಿಕ್ಕಮಗಳೂರು–ಬೇಲೂರು–ಸಕಲೇಶಪುರ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಲಾಯಿತು. ಇದರಲ್ಲಿ ರಾಜ್ಯದ ಪಾಲು ಶೇ 50 ಆಗಿದ್ದರೆ, ಉಳಿದ ಮೊತ್ತವನ್ನು ಕೇಂದ್ರ ಭರಿಸಲಿದೆ.
ಈ ತಿಂಗಳಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನ ಹಾಗೂ ಫೆಬ್ರುವರಿ ಮೊದಲ ವಾರದಲ್ಲಿ ಬಜೆಟ್ ಅಧಿವೇಶನ ನಡೆಸಬೇಕು ಎಂದು ಹೆಚ್ಚಿನ ಸಚಿವರು ಸಲಹೆ ನೀಡಿದರು. ಈ ಬಗ್ಗೆ ಮುಖ್ಯಮಂತ್ರಿ 2–3 ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಸುದ್ದಿಗಾರರಿಗೆ ತಿಳಿಸಿದರು.
ಇತರ ಪ್ರಮುಖ ನಿರ್ಧಾರಗಳು
* ವಿಜಯಪುರ ಜಿಲ್ಲೆಯ ತಿಕೋಟಾ ಹಾಗೂ ಇತರ 23 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ₹73.62 ಕೋಟಿ ಪರಿಷ್ಕೃತ ಅಂದಾಜಿಗೆ ಅನುಮೋದನೆ
* ಬೆಟ್ಟ ಕುರುಬ ಜಾತಿಯನ್ನು ಕಾಡು ಕುರುಬ ಜಾತಿಗೆ (ಪರಿಶಿಷ್ಟ ಪಂಗಡ) ಸಮಾನಾಂತರವಾಗಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧಾರ.
* ಆಲಮಟ್ಟಿ ಅಣೆಕಟ್ಟಿನ 1ನೇ ಪ್ಯಾಕೇಜ್ನಲ್ಲಿ ಶೇ 34.75ರ ಹೆಚ್ಚುವರಿ ಆರ್ಥಿಕ ಹೊಣೆಯ ₹7.66 ಕೋಟಿ ಮೊತ್ತಕ್ಕೆ ಅನುಮೋದನೆ
* ಶಿವಮೊಗ್ಗ ಜಿಲ್ಲಾ ಸಿಂಗನಮನೆ ಮೀಸಲು ಅರಣ್ಯದಿಂದ ಕುವೆಂಪು ವಿಶ್ವವಿದ್ಯಾಲಯಕ್ಕೆ ನೀಡಿರುವ ಅರಣ್ಯ ಜಮೀನಿಗೆ ಪರ್ಯಾಯವಾಗಿ ಚಿಕ್ಕಮಗಳೂರು ಜಿಲ್ಲೆಯ ಕೆಸವಿನಮನೆ ಗ್ರಾಮದ ಲ್ಯಾಂಡ್ ಬ್ಯಾಂಕ್ನಿಂದ 644 ಎಕರೆ 38 ಗುಂಟೆ ವರ್ಗಾವಣೆಗೆ ಒಪ್ಪಿಗೆ
* ಖಾಸಗಿ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 60 ನಾಡಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ₹10 ಕೋಟಿ ಬಿಡುಗಡೆಗೆ ಅನುಮೋದನೆ
* ಅಂಗನವಾಡಿಗಳಿಗೆ ವೈದ್ಯಕೀಯ ಕಿಟ್ಗೆ ₹9.63 ಕೋಟಿ ಬಿಡುಗಡೆಗೆ ಒಪ್ಪಿಗೆ. ಪೂರ್ವ ಪ್ರಾಥಮಿಕ ಶೈಕ್ಷಣಿಕ ಕಿಟ್ಗೆ ₹19.77 ಕೋಟಿ
* 2019–20ನೇ ಶೈಕ್ಷಣಿಕ ವರ್ಷದಲ್ಲಿ ಒಂದರಿಂದ ಎಸ್ಸೆಸ್ಸೆಲ್ಸಿ ವರೆಗಿನ 44.57 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲು ₹77.64 ಕೋಟಿ ಮಂಜೂರು
* ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ ಒಂದು ಸಾವಿರ ಮಂದಿಯನ್ನು ಗ್ರಾಮ ಪಂಚಾಯಿತಿ ಸಹಾಯಕರನ್ನಾಗಿ ಈ ಹಿಂದೆ ನೇಮಿಸಿಕೊಳ್ಳಲಾಗಿತ್ತು. ದ್ವಿತೀಯ ಪಿಯುಸಿ ಪೂರ್ಣಗೊಳಿಸದ ಕಾರಣ ಅವರ ಬಡ್ತಿಯನ್ನು ತಡೆ ಹಿಡಿಯಲಾಗಿತ್ತು. ಅವರಿಗೆ ಬಡ್ತಿ
* ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆ ಮೂಲಕ ಚಿಕ್ಕೋಡಿ ತಾಲ್ಲೂಕಿನಲ್ಲಿ 54 ಕಿ.ಮೀ. ಪ್ರದೇಶಕ್ಕೆ ನೀರು ಹರಿಸುವ ₹139.55 ಕೋಟಿ ವೆಚ್ಚದ ಯೋಜನೆಗೆ ಒಪ್ಪಿಗೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.