ಮಂಗಳೂರು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ (ಎಪಿಎಂಸಿ) ನಡೆಯುವ ವಹಿವಾಟಿನ ಮೇಲೆ ವಿಧಿಸುತ್ತಿರುವ ಸೆಸ್ ಅನ್ನು ಇಳಿಕೆ ಮಾಡುವ ಪ್ರಸ್ತಾವವಿದ್ದು, ಜುಲೈ 9ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಲ್ಲಿ ಶುಕ್ರವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಏಕರೂಪ ತಂತ್ರಾಂಶ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿ, ‘ಎಪಿಎಂಸಿ ಕಾಯ್ದೆ ತಿದ್ದುಪಡಿ ಬಳಿಕ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಮುಕ್ತ ಅವಕಾಶವಿದೆ. ಬೇರೆ ಕಡೆ ಸೆಸ್ ಇಲ್ಲ. ಆದ್ದರಿಂದ ಎಪಿಎಂಸಿ ಸೆಸ್ ಕಡಿತ ಮಾಡುವಂತೆ ವರ್ತಕರು ಬೇಡಿಕೆ ಇಟ್ಟಿದ್ದಾರೆ’ ಎಂದರು.
ವರ್ಷಕ್ಕೆ ಸುಮಾರು ₹ 600 ಕೋಟಿಗೂ ಹೆಚ್ಚು ಎಪಿಎಂಸಿ ಸೆಸ್ ಸಂಗ್ರಹವಾಗುತ್ತಿದೆ. ಸಿಬ್ಬಂದಿ ವೇತನ, ಅಭಿವೃದ್ಧಿ ಕಾಮಗಾರಿ ಮತ್ತು ಸ್ವಚ್ಛತೆ ನಿರ್ವಹಣೆಗೆ ಈ ಹಣವನ್ನೇ ಬಳಸಲಾಗುತ್ತಿದೆ. ಈ ವೆಚ್ಚಗಳಿಗಾಗಿ ವಾರ್ಷಿಕ ಅಗತ್ಯವಿರುವ ಮೊತ್ತದ ಕುರಿತು ವರದಿ ಸಲ್ಲಿಸಲು ಸೂಚಿಸಲಾಗುತ್ತದೆ. ಅದನ್ನು ಪರಿಶೀಲಿಸಿದ ಬಳಿಕ ಸೆಸ್ ಇಳಿಕೆ ಪ್ರಮಾಣದ ಕುರಿತು ನಿರ್ಧರಿಸಲಾಗುವುದು ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.