ಕಲಬುರ್ಗಿ: ಪೌರತ್ವ (ತಿದ್ದುಪಡಿ) ಮಸೂದೆ ವಿರುದ್ಧ ಸಿಡಿದೆದ್ದ ಮುಸ್ಲಿಂ ಸಮುದಾಯದವರು, ಶಾಸಕಿ ಕನೀಜ್ ಫಾತಿಮಾ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಗೆ ಅವಕಾಶ ಕೊಡುವಂತೆ ಪೀಪಲ್ಸ್ ಫೋರಂ– ಗುಲಬರ್ಗಾ ಸಂಘಟನೆ ಗುರುವಾರ ಮನವಿ ಸಲ್ಲಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ನಗರ ಪೊಲೀಸ್ ಆಯುಕ್ತರು ನಗರದಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದರು. ಇದರಿಂದ ಸಿಡಿದೆದ್ದ ಪ್ರತಿಭಟನಾಕಾರರು, ನಿಷೇಧಾಜ್ಞೆ ಹಿಂಪಡೆಯಬೇಕು ಎಂದು ಆಗ್ರಹಿಸಿ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ, ಧರಣಿ ನಡೆಸಿದರು.
ಇದಕ್ಕೆ ಮಣಿದ ನಗರ ಪೊಲೀಸ್ ಕಮಿಷನರ್ ಎಂ.ಎನ್. ನಾಗರಾಜ, ನಿಷೇಧಾಜ್ಞೆ ಇರುವ ಸ್ಥಳ ಬಿಟ್ಟು ಬೇರೆ ಕಡೆ ಪ್ರತಿಭಟನೆ ನಡೆಸಲು ಅವಕಾಶ ನೀಡಿದರು.
ಮಧ್ಯಾಹ್ನ 3ರ ಹೊತ್ತಿಗೆ ಇಲ್ಲಿನ ಮುಸ್ಲಿಂ ಚೌಕ್ನಲ್ಲಿ ಸೇರಿದ ಸಾವಿರಾರು ಮಂದಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಮೊಳಗಿಸಿದರು. ಮಸೂದೆಯ ಜೆರಾಕ್ಸ್ ಪ್ರತಿಗಳನ್ನು ಹರಿದುಹಾಕಿ ಆಕ್ರೋಶ ಹೊರಚೆಲ್ಲಿದರು.
ಮುಖಂಡರಾದ ಮಹಮ್ಮದ್ ಅಸಗರ ಚುಲ್ಬುಲ್, ನಾಸಿರ್ ಹುಸೇನ್ ಉಸ್ತಾದ್, ಇಲಿಯಾಸ್ ಬಾಗವಾನ್, ಮಾರುತಿ ಮಾನಪಡೆ ಮಾತನಾಡಿ, ‘ಬಿಜೆಪಿ ಸರ್ಕಾರ ವೈಫಲ್ಯ ಮುಚ್ಚಿಹಾಕಲು ಈ ರೀತಿಯ ವಿಛಿದ್ರಕಾರಿ ಮಸೂದೆ ಜಾರಿ ಮಾಡಿ ಜನರ ದಾರಿ ತಪ್ಪಿಸುತ್ತಿದೆ’ ಎಂದೂ ಘೋಷಣೆ ಕೂಗಿದರು.