ಹೊಸಪೇಟೆ: ಹಂಪಿ ಸ್ಮಾರಕಗಳಿಗೆ ಹಾನಿ ಉಂಟು ಮಾಡಿರುವ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿಸೋಮವಾರ ತಾಲ್ಲೂಕಿನ ಕಮಲಾಪುರದಲ್ಲಿ ನಡೆದ ಸಾಂಕೇತಿಕ ಪ್ರತಿಭಟನೆಯನ್ನು ಬೆಂಬಲಿಸಿ ಮೈಸೂರಿನ ಯದುವೀರ್ ನರಸಿಂಹರಾಜ ದತ್ತ ಒಡೆಯರ್, ವಿಜಯನಗರ ರಾಜಮನೆತನದ ಕೃಷ್ಣದೇವರಾಯ ಪಾಲ್ಗೊಂಡಿದ್ದರು.
ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣೆ ಸೇನೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆವಿಜಯನಗರ ಅಂಗವಿಕಲರ ಸಂಘ, ಜನ್ಮಭೂಮಿ ರಕ್ಷಣಾ ಪಡೆ, ಗಂಡುಗಲಿ ಕುಮಾರರಾಮ ಸೇನೆ ಸಂಘಟನೆ ಬೆಂಬಲ ವ್ಯಕ್ತಪಡಿಸಿತ್ತು.
ಕಮಲಾಪುರದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎ.ಎಸ್.ಐ.) ಹಂಪಿ ವೃತ್ತದ ಕಚೇರಿ ಎದುರು ಪ್ರತಿಭಟನೆ ನಡೆಸಿ, ನಂತರ ಎ.ಎಸ್.ಐ. ಡೆಪ್ಯುಟಿ ಸೂಪರಿಟೆಂಡೆಂಟ್ ಪಿ. ಕಾಳಿಮುತ್ತು ಅವರಿಗೆ ಮನವಿ ಪತ್ರ ಸಲ್ಲಿಸಿದರು.
‘ಹಂಪಿಯಲ್ಲಿರುವ ಎಲ್ಲ ಸ್ಮಾರಕಗಳ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ವಿಷ್ಣು ದೇಗುಲ ಮಂಟಪದ ಕಲ್ಲುಗಂಬಗಳನ್ನು ಬೀಳಿಸಿ, ವಿಡಿಯೊ ವೈರಲ್ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.
ಸಂರಕ್ಷಣೆ ಸೇನೆಯ ಮುಖ್ಯಸ್ಥ ವಿಶ್ವನಾಥ ಮಾಳಗಿ, ಮುಖಂಡರಾದ ಈರಣ್ಣ ಪೂಜಾರಿ, ಗುರುನಾಥ, ಶ್ರೀನಿವಾಸ ಗುಜ್ಜಲ್, ಉಪೇಂದ್ರ ನಾಯಕ, ಶಿವಕುಮಾರ ಇದ್ದರು.