ರಾಯಚೂರು: ‘ಐದು ದಶಕಗಳಿಂದ ನಮ್ಮ ಕುಟುಂಬದ ಸದಸ್ಯರೆಲ್ಲರೂ ರಾಯರ ಭಕ್ತರು. ಯಾವುದೇ ಶುಭಕಾರ್ಯ ಆರಂಭಿಸುವಾಗ ರಾಯರ ಆಶೀರ್ವಾದ ಸ್ಮರಿಸುತ್ತೇವೆ’ ಎಂದು ಚಿತ್ರನಟ ಪುನೀತರಾಜಕುಮಾರ್ ಹೇಳಿದರು.
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಜನ್ಮದಿನದಂದು ನಡೆದ ವರ್ಧಂತಿ ಮಹೋತ್ಸವದಲ್ಲಿ ಪಾಲ್ಗೊಂಡು ರಾಯರ ದರ್ಶನ ಪಡೆದು ಹಾಗೂ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
— 𝐏𝐮𝐧𝐞𝐞𝐭𝐡 𝐑𝐚𝐣𝐤𝐮𝐦𝐚𝐫 𝐅𝐂® (@PowerStarPunith) March 2, 2020
‘ಮಂತ್ರಾಲಯಕ್ಕೆ ಬಂದರೆ ನಮ್ಮ ಮನೆಗೆ ಬಂದಂತ ಅನುಭವ. ಹಳೇ ನೆನಪುಗಳು ಬರುತ್ತವೆ’ ಎಂದು ಭಾಗ್ಯವಂತರು ಸಿನಿಮಾ ಚಿತ್ರೀಕರಣದ ಸಂದರ್ಭವನ್ನು ನೆನಪಿಸಿಕೊಂಡರು.
‘ಅಪ್ಪಾಜಿ (ಡಾ.ರಾಜಕುಮಾರ್) ಅವರು ರಾಘವೇಂದ್ರ ಸ್ವಾಮೀಜಿ ಅವರ ಕುರಿತು ಹಾಡಿದ ಹಾಡುಗಳು ಜಗತ್ಪ್ರಸಿದ್ಧವಾಗಿವೆ. ಅವರು ರಾಯರ ಪಾತ್ರ ಮಾಡಿದ ಬಳಿಕ, ರಾಘವೇಂದ್ರ ಸ್ವಾಮಿಗಳು ಹೀಗೆ ಇದ್ದರೆನೋ.. ಎನ್ನುವಂತಹ ಅನುಭವ ಎಲ್ಲರಲ್ಲೂ ಬಂತು’ ಎಂದರು.
ಡಾ.ರಾಜಕುಮಾರ್ ಅವರನ್ನು ನೆನೆಪಿಸಿಕೊಳ್ಳುತ್ತಾ ‘ವಾರ ಬಂತಮ್ಮ ಗುರುವಾರ ಬಂತಮ್ಮ...’ ಹಾಡು ಹಾಡಿದರು.
ಈ ಹಾಡನ್ನು ಮತ್ತೊಮ್ಮೆ ಅಭ್ಯಾಸ ಮಾಡಿಕೊಂಡು, ಅಗಸ್ಟ್ನಲ್ಲಿ ರಾಯರ ಆರಾಧನೆ ಸಂದರ್ಭದಲ್ಲಿ ಪೂರ್ಣವಾಗಿ ಹಾಡುತ್ತೇನೆ ಎಂದರು.